ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ದೂರುಗಳಿಗೆ 90 ದಿನಗಳಲ್ಲಿ ಪರಿಹಾರ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯ ಜಿ. ಶ್ರೀಪತಿ ಹೇಳಿಕೆ
Last Updated 27 ಡಿಸೆಂಬರ್ 2022, 4:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗದ ಮುಂದೆ ಬರುವ ಪ್ರಕರಣಗಳನ್ನು 90 ದಿನದೊಳಗೆ ಬಗೆಹರಿಸಿ ಪರಿಹಾರ ನೀಡಲಾಗುವುದು. ಇದು ಆಯೋಗದ ಕರ್ತವ್ಯವಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯ ಜಿ. ಶ್ರೀಪತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ‘ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ವಿವಾದ ಬಗೆಹರಿಸಿಕೊಳ್ಳಲು ಯಾವುದೇ ರೀತಿಯ ಹಣ ನೀಡಬೇಕಿಲ್ಲ. ಸೇವಾ ನ್ಯೂನತೆ ಇದ್ದಾಗ ಗ್ರಾಹಕ ಆಯೋಗ ಸಂಪರ್ಕಿಸಬಹುದು’ ಎಂದರು.

‘ಪ್ರಸ್ತುತ ದಿನಗಳಲ್ಲಿ ಪ್ರತಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡಲಾಗುತ್ತಿದೆ. ಈ ವ್ಯವಹಾರದಿಂದ ಮೋಸದ ಜೊತೆಗೆ ನ್ಯೂನತೆಗಳು ಹೆಚ್ಚಳವಾಗಿವೆ. ಸೇವಾ ನ್ಯೂನತೆ ಉಂಟಾದಾಗ ಗ್ರಾಹಕ ಆಯೋಗ ಸಂಪರ್ಕ ಮಾಡಿದಾಗ ಅತೀ ಕಡಿಮೆ ಸಮಯದಲ್ಲಿ ನ್ಯಾಯಬದ್ಧವಾಗಿ ಆದೇಶ ಹಾಗೂ ಪರಿಹಾರ ದೊರೆಯಲಿದೆ’ ಎಂದು ತಿಳಿಸಿದರು.

‘ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶದ ಸಮರ್ಪಕವಾಗಿ ಸಮಾಧಾನ ತರದೇ ಇದ್ದರೆ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದು. ಹೀಗೆ ವಿವಿಧ ಹಂತಗಳಲ್ಲಿ ನ್ಯಾಯ ಪಡೆಯಲು ಅವಕಾಶವಿದೆ’
ಎಂದರು.

ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ. ಮಧುಸೂದನ್‌ ಮಾತನಾಡಿ, ‘ಹುಟ್ಟಿದಾಗಿನಿಂದ ಸಾಯುವ ಕ್ಷಣದವರೆಗೂ ಕೂಡ ನಾವು ಗ್ರಾಹಕರಾಗಿರುತ್ತೇವೆ. ಹಣ ಕೊಟ್ಟು ವಸ್ತು ಹಾಗೂ ಸೇವೆ ಪಡೆದುಕೊಂಡಾಗ ಆ ಹಣದ ನ್ಯಾಯಯುತ ಬೆಲೆಗೆ ಅದು ಅರ್ಹವಾಗಿದೆಯೇ ಎಂಬುದನ್ನು ನಾವು ಅಲೋಚನೆ ಮಾಡಬೇಕಿದೆ. ನಮ್ಮ ಹಣಕ್ಕೆ ಸರಿಯಾದ ರೀತಿಯಲ್ಲಿ ಸೇವೆ, ವಸ್ತು ದೊರೆತಿದೆಯೇ ಎಂಬುದನ್ನು ನಾವು ಮನಗಾಣಬೇಕು’
ಎಂದರು.

‘ಗ್ರಾಹಕರ ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಆನ್‌ಲೈನ್‌ ವ್ಯವಹಾರದಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ. ಇಲಾಖೆ ವತಿಯಿಂದ ಪ್ರತಿ ವರ್ಷವೂ 20 ಶಾಲೆಗಳಲ್ಲಿ ಗ್ರಾಹಕರ ಕ್ಲಬ್‌ಗಳನ್ನು ಪ್ರಾರಂಭ ಮಾಡಿದ್ದೇವೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು. ಗ್ರಾಹಕರ ಕೈಪಿಡಿ ಬಿಡುಗಡೆ ಮಾಡಲಾಯಿತು. ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್‌, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ. ಗುರುಪ್ರಸಾದ್‌, ಆಹಾರ ಸುರಕ್ಷತಾಧಿಕಾರಿ ತಿರುಮಲೇಶ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ತುಕಾರಾಂರಾವ್‌, ಆಹಾರ ಶಿರಸ್ತೇದಾರರಾದ ಸುರೇಶ್‌, ಲಿಂಗರಾಜು, ರಮೇಶ್‌, ವೀರಣ್ಣ, ತಿಪ್ಪೇಸ್ವಾಮಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT