ಮೊಳಕಾಲ್ಮುರು: ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂಶಿಕ್ಷಣದ ಅಭಿವೃದ್ಧಿಗೆ ಸಹಕಾರ ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಗತ ವಾದಲ್ಲಿ ಮಾತ್ರ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ ಎಂದು ಬಿಆರ್ಪಿ ಉಮೇಶಯ್ಯ ಹೇಳಿದರು.
ತಾಲ್ಲೂಕಿನ ಕೊಂಡ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ‘ಸಮುದಾಯ ಮತ್ತು ಕಲಿಕಾ ಪ್ರಕ್ರಿಯೆಗಳು’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಿಕ್ಷಣ ಕೇವಲ ಸರ್ಕಾರದ ಕೆಲಸ ಎಂಬ ಭಾವನೆ ಸರಿಯಲ್ಲ. ಸಹಕಾರ ಸಂಘಗಳು, ಸಂಘ, ಸಂಸ್ಥೆಗಳು, ಮಹಿಳಾ ಸ್ವಸಹಾಯ ಸಂಘಗಳು, ಜನಪ್ರತಿನಿಧಿಗಳು, ಯುವಕ–ಯುವತಿಯರು, ಗ್ರಾಮ ಪಂಚಾಯಿತಿಗಳುಸಹಕಾರ ನೀಡಲು ಸಾಧ್ಯವಿದೆ ಎಂದು ಹೇಳಿದರು.
ಕೊಂಡ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಶಾಲೆಗೆ ಸಂಬಂಧಿಸಿದ 12.30 ಗುಂಟೆ ಜಮೀನಿದ್ದು, ಇದನ್ನು ಶಾಲೆಗೆ ಬಿಡಿಸಿಕೊಡಲು ಕ್ರಮ ಕೈಗೊಳ್ಳಬೇಕು. ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಪಿಡಿಒ ಪ್ರಹ್ಲಾದ್ ಅವರಿಗೆ ಮನವಿ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಈರಣ್ಣ ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋನಸಾಗರ ಪಾಲಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಇಮಾಂಹುಸೇನ್, ಬಿ.ಟಿ. ಹನುಮರೆಡ್ಡಿ, ಶಾಂತಮ್ಮ, ಕರೇಗೌಡ, ರಾದಮ್ಮ, ಮುಖ್ಯಶಿಕ್ಷಕರಾದ ಕರಿಬಸಪ್ಪ, ಮಮತಾ ಇದ್ದರು.