ಚಿತ್ರದುರ್ಗ: ಇಲ್ಲಿನ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಾರು ಚಾಲಕರೊಬ್ಬರಿಗೆ ಕೋವಿಡ್ ದೃಢಪಟ್ಟಿದ್ದರಿಂದ ಕಚೇರಿಯನ್ನು ಶುಕ್ರವಾರ ಸೀಲ್ಡೌನ್ ಮಾಡಲಾಗಿದೆ.
ಸೋಂಕು ಖಚಿತವಾಗುತ್ತಿದ್ದಂತೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಗಿದೆ. ಮುಖ್ಯ ದ್ವಾರಕ್ಕೆ ಬ್ಯಾರಿಕೇಡ್ಗಳನ್ನು ಇಟ್ಟು ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ.
‘ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಕ್ವಾರಂಟೈನ್ ಆಗಿದ್ದಾರೆ. ಅಗತ್ಯ ಸೇವೆ ಒದಗಿಸುವ ಸಿಬ್ಬಂದಿ ಮನೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ ಎರಡು ದಿನ ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿಲ್ಲ. ಸೋಮವಾರ ಎಂದಿನಂತೆ ನಗರಸಭೆ ಕಾರ್ಯನಿರ್ವಹಿಸಲಿದೆ’ ಎಂದು ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ದಾರೆ.
65 ಜನರಿಗೆ ಸೋಂಕು
ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 65 ಜನರಿಗೆ ಕೋವಿಡ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 957ಕ್ಕೆ ಏರಿಕೆಯಾಗಿದೆ. 1,534 ಜನರ ಪ್ರಯೋಗಾಲಯದ ವರದಿ ಬರುವುದು ಇನ್ನೂ ಬಾಕಿ ಇದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 20, ಹೊಳಲ್ಕೆರೆ 3, ಹಿರಿಯೂರು 10, ಚಳ್ಳಕೆರೆ 24, ಹೊಸದುರ್ಗ 5 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 3 ಪ್ರಕರಣ ದೃಢಪಟ್ಟಿವೆ.
ರ್ಯಾಪಿಡ್ ಆಂಟಿಜನ್ ಕಿಟ್ನಲ್ಲಿ 199 ಹಾಗೂ ಆರ್ಟಿಪಿಸಿಆರ್ ಪ್ರಯೋಗಾಲಯದಲ್ಲಿ 227 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಅ65 ಜನರಲ್ಲಿ ಸೋಂಕು ಖಚಿತವಾಗಿದೆ. ತೀವ್ರ ನಿಗಾ ಘಟಕದಲ್ಲಿ 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದೆಡೆ ಕೋವಿಡ್ ಗುಣಮುಖರಾದ 22ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 502ಕ್ಕೆ ಏರಿಕೆಯಾಗಿದ್ದು, 440 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಹೆಚ್ಚುತ್ತಿರುವುದು ಆಶಾಭಾವನೆ ಮೂಡಿಸಿದೆ. ಜಿಲ್ಲೆಯಲ್ಲಿ ಸದ್ಯ 302 ಕಂಟೈನ್ಮೆಂಟ್ ವಲಯಗಳಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ತಿಳಿಸಿದೆ.