ಚಿತ್ರದುರ್ಗ: ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯಿಂದ ಮನೆಗೆ ಮರಳುತ್ತಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ 9 ಆರೋಪಿಗಳನ್ನು ಹಿರಿಯೂರು ತಾಲ್ಲೂಕಿನ ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚಳ್ಳಕೆರೆಯ ಚಿತ್ರಯ್ಯನಹಟ್ಟಿಯ ವಿವೇಕಾನಂದ (24), ಜಗದೀಶ (25), ತಿಪ್ಪೇಸ್ವಾಮಿ (26), ಶಿವಕುಮಾರ್ (26), ವಿರೂಪಾಕ್ಷ (32), ಬಸವರಾಜ (56), ಸುರೇಶ (21), ಮಾರುತಿ (25) ಹಾಗೂ ಶಿವಣ್ಣ (27) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯ ಮಹಿಳೆಯರು ಕಸ್ತೂರಿ ರಂಗಪ್ಪನಹಳ್ಳಿ ಸಮೀಪದ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿಕೊಂಡು ಸೋಮವಾರ ಸಂಜೆ ಕ್ರೂಸರ್ನಲ್ಲಿ ಊರಿಗೆ ಮರಳುತ್ತಿದ್ದಾಗ ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದರು.
ಗನ್ನನಾಯಕನಹಳ್ಳಿ ಗೇಟ್ ಸಮೀಪ ಮಹಿಳೆಯರು ಪ್ರಯಾಣಿಸುತ್ತಿದ್ದ ವಾಹನವನ್ನು ಆರೋಪಿಗಳು ಅಡ್ಡಹಾಕಿದ್ದಾರೆ. ಮದ್ಯದ ಬಾಟಲಿಗಳನ್ನು ವಾಹನಕ್ಕೆ ಎಸೆದು ಮಹಿಳೆಯರನ್ನು ವಾಹನದಿಂದ ಹೊರಗೆ ಎಳೆದಿದ್ದಾರೆ. ಈ ಸಂಬಂಧ ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.