ಹೊಸದುರ್ಗ: ನಿಧಿ ಆಸೆಗಾಗಿ ದುಷ್ಕರ್ಮಿಗಳು ದೇವಾಲಯದಲ್ಲಿರುವ ಈಶ್ವರ ಲಿಂಗವನ್ನೇ ಅಗೆದಿರುವ ಘಟನೆ ತಾಲ್ಲೂಕಿನ ದೊಡ್ಡಘಟ್ಟ ಸಮೀಪದ ಗಿಣಿ ವಜ್ರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಪುರಾತನ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ ಶಿವನ ವಿಗ್ರಹ ಮತ್ತು ನಂದಿ ವಿಗ್ರಹ ಇದೆ. ಆದರೆ, ಇಲ್ಲಿರುವ ವಿಗ್ರಹಗಳನ್ನು ದುಷ್ಕರ್ಮಿಗಳು ಸುಮಾರು 5 ಅಡಿ ಬಗೆದು ಕೆಡವಿ ಹಾಳುಗೆಡವಿದ್ದಾರೆ. ನಂತರ ಅಲ್ಲಿರುವ ಕಡಪ ಕಲ್ಲುಗಳನ್ನು ಸಹ ಒಡೆದು ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಅದೇ ಗ್ರಾಮದ ಯುವಕನೊಬ್ಬ ದೇವಸ್ಥಾನ ಮುಂಭಾಗ ನಿಂತು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ಹೊಸದುರ್ಗ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಹುಂಡಿ ಕಳ್ಳತನ ಹಾಗೂ ನಿಧಿ ಆಸೆಗೆ ದೇವರ ವಿಗ್ರಹಗಳನ್ನು ನಾಶ ಮಾಡಿದ ಪ್ರಕರಣಗಳು ನೆಡೆಯುತ್ತಿವೆ. ಸಂಬಂಧಪಟ್ಟ ಇಲಾಖೆ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಿವನ ವಿಗ್ರಹ ಮತ್ತು ನಂದಿ ವಿಗ್ರಹಗಳನ್ನು ಹಾಳುಗೆಡವಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.