ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಕಣ್ತಪ್ಪಿದಾಗ...

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹಿಂದೂಸ್ತಾನಿ ಸಂಗೀತಕ್ಷೇತ್ರದ ಮುಕುಟಮಣಿ ಪಂಡಿತ್‌ ಭೀಮಸೇನ ಜೋಶಿ ಅವರು ಐದಾರು ವರ್ಷದ ಬಾಲಕನಾಗಿದ್ದಾಗ ಮೂರು ಬಾರಿ ತಂದೆಯ ಕೈಯಿಂದ ತಪ್ಪಿಹೋಗಿದ್ದರಂತೆ. ಆದರೆ ಅವರನ್ನು ಮನೆಗೆ ಕರೆತಂದು ಬಿಡುತ್ತಿದ್ದುದು ಗುರುತು ಪರಿಚಯವಿಲ್ಲದವರು. ಅದು ಹೇಗೆ ಅಂತೀರಾ? ತಂದೆ ಗುರುರಾಜ ಜೋಶಿ ಅವರು ಮಗನ ಕೊರಳಿಗೆ ಒಂದು ಚೀಟಿಯನ್ನು ಪದಕದಂತೆ ಕಟ್ಟಿ ಹಾರ ಹಾಕಿಬಿಡುತ್ತಿದ್ದರಂತೆ. ಅದರಲ್ಲಿನ ಒಕ್ಕಣೆ ಹೀಗಿರುತ್ತಿತ್ತು: ‘ನಾನು ಕಳೆದುಹೋಗಿ ನಿಮಗೇನಾದರೂ ಸಿಕ್ಕಿದರೆ ನನ್ನನ್ನು ಈ ವಿಳಾಸಕ್ಕೆ ತಲುಪಿಸಿ’. ಚೀಟಿಯ ಹಾರವೇ ಅವರ ಮನೆ ದಾರಿಗೆ ಕೈಮರವಾಗುತ್ತಿತ್ತು.

ಎಂತಹ ಮಾದರಿ ಉಪಾಯ ಅಲ್ವೇ? ಮಕ್ಕಳು ತಂದೆ ತಾಯಿಯ ಕೈತಪ್ಪಿ ಕಳೆದುಹೋಗುವುದು, ಅತ್ತ ಮಕ್ಕಳು ಇತ್ತ ಮನೆ ಮಂದಿ ಅಸಹಾಯಕರಾಗಿ ಪೇಚಾಡುವುದು ಸಾಮಾನ್ಯ. ಮಕ್ಕಳನ್ನು ಹೊರಗೆ ಸುತ್ತಾಡಲು ಕರೆದೊಯ್ಯುವಾಗ ಅವರು ಕಣ್ಣಂಚಿನಲ್ಲೇ ಇರುವಂತೆ ನೋಡಿಕೊಳ್ಳುವುದು ಅತ್ಯಗತ್ಯ.

ರಜಾ ದಿನಗಳಲ್ಲಿ ಮದುವೆ, ಆರತಕ್ಷತೆ, ಪಿಕ್‌ನಿಕ್‌, ಜಾತ್ರೆ, ಪ್ರವಾಸ, ಶಾಪಿಂಗ್‌ ಅಂತ ಹೋಗುವುದು ಇದ್ದಿದ್ದೇ. ಈ ಸಂದರ್ಭಗಳಲ್ಲಿ ಮಕ್ಕಳು ನಮ್ಮ ಕೈತಪ್ಪಿಹೋಗದಂತೆ, ಅಕಸ್ಮಾತ್‌ ಕೈತಪ್ಪಿದರೂ ಸುರಕ್ಷಿತವಾಗಿ ಮರಳುವಂತೆ ಮಾಡಲು ಕೆಲವು ಸುರಕ್ಷತಾ ಕ್ರಮಗಳನ್ನು ನಾವು ಪಾಲಿಸುವುದು ಸೂಕ್ತ.

ಹೀಗೆ ಮಾಡಿ...

*ಮಕ್ಕಳ ಬಟ್ಟೆಗೆ ಇಸ್ತ್ರಿ ಮಾಡುವಾಗಲೇ ಪ್ಯಾಂಟು ಮತ್ತು ಶರ್ಟಿನ ಜೇಬಿನಲ್ಲಿ ತಂದೆ ತಾಯಿ ಹಾಗೂ ಇನ್ನೂ ಇಬ್ಬರ ಮೊಬೈಲ್‌ ನಂಬರ್‌ ಬರೆದ ಚೀಟಿ ಇರಿಸಿ.

*ಅಪ್ಪ ಅಮ್ಮನದ್ದಲ್ಲದೆ ಆಪ್ತರೊಬ್ಬರ ಮೊಬೈಲ್‌ ಸಂಖ್ಯೆಯೂ ಮಕ್ಕಳಿಗೆ ಬಾಯಿ ಪಾಠವಿರಲಿ. ತುರ್ತು ಸಂದರ್ಭದಲ್ಲಿ ಯಾರದ್ದಾದರೂ ಮೊಬೈಲ್‌ನಿಂದ ನಿಮಗೆ ಕರೆ ಮಾಡುವಂತೆ ಅವರಿಗೆ ಹೇಳಿ

*ಚೀಟಿಯಲ್ಲಿ ಬರೆದಿರುವ ಇತರ ನಂಬರ್‌ಗಳ ವ್ಯಕ್ತಿಗಳಿಗೆ ಈ ಬಗ್ಗೆ ಸೂಚನೆ ಕೊಡಿ. ಅಪರಿಚಿತ ಸಂಖ್ಯೆಯಿಂದ ಬರುವ ಕರೆಗಳನ್ನು ಅಲಕ್ಷಿಸದಂತೆ ತಿಳಿಸಿ

*ನೀವು ಪ್ರಯಾಣಿಸುವ ವಾಹನದ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವಂತೆ ಮಕ್ಕಳಿಗೆ ತಿಳಿಸಿ

*ಒಂದು ವೇಳೆ ಮಕ್ಕಳು ಕಣ್ತಪ್ಪಿದರೂ ಆಯಾ ಮಹಡಿಯಲ್ಲಿ ಇಲ್ಲವೇ ಕಟ್ಟಡದಲ್ಲಿ ಭೇಟಿಯಾಗಬೇಕಾದ ಸ್ಥಳವನ್ನು ಎಲ್ಲರೂ ಒಟ್ಟಾಗಿ ತೀರ್ಮಾನಿಸಿ.

*ದೇವಸ್ಥಾನಗಳಲ್ಲಿ ಕೂಡಾ ಹೀಗಾಗುವುದುಂಟು. ಅದಕ್ಕಾಗಿ, ಯಾರೇ ಮೊದಲು ಬಂದರೂ ಪ್ರವೇಶದ್ವಾರದ ಬಳಿ ಕಾಯುವಂತೆ ಪರಸ್ಪರ ನಿರ್ಧರಿಸಿಕೊಳ್ಳಿ

*ಹೊಸ ಸ್ಥಳದಲ್ಲಿ ಶೌಚಾಲಯಕ್ಕೆ, ಮೂತ್ರ ವಿಸರ್ಜನೆಗೆ ಮಕ್ಕಳನ್ನು ಒಂಟಿಯಾಗಿ ಕಳುಹಿಸಬೇಡಿ

*ತಂದೆ ಮತ್ತು ಮಗಳು ಮಾತ್ರ ಹೋಗಿದ್ದರೂ ಅವಳ ಸುರಕ್ಷೆಯ ಬಗ್ಗೆ ಉದಾಸೀನ ಮಾಡಬೇಡಿ. ನಿರ್ದಿಷ್ಟ ಸಮಯಕ್ಕೆ ಮಗಳು ಟ್ರಯಲ್‌ ರೂಮ್‌ನಿಂದ, ಶೌಚಾಲಯದಿಂದ ಹೊರಬರದಿದ್ದರೆ ಜೋರಾಗಿ ಕರೆಯಲು ಮುಜುಗರಪಡಬೇಡಿ

*ಮಾಲ್‌ಗಳಿಗೆ ಅಥವಾ ಬಹುಮಹಡಿ ಕಟ್ಟಡಗಳಲ್ಲಿ ಪೋಷಕರು ಮತ್ತು ಮಕ್ಕಳು ಸಂಪರ್ಕ ಕಡಿದುಕೊಂಡರೆ ಮೊದಲು ಅಲ್ಲಿನ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ನೆರವು ಪಡೆದು ಮೈಕ್‌ ಮೂಲಕ ಪ್ರಕಟಣೆ ನೀಡುವಂತೆ ಮನವಿ ಮಾಡಿ.

*ಲಿಫ್ಟ್‌ನಲ್ಲಿ ಹೋಗುತ್ತಿರುವಾಗಲೇ ಕರೆಂಟ್‌ ಹೋದರೆ ಅಥವಾ ಅರ್ಧಕ್ಕೆ ನಿಂತುಹೋದರೆ ತಕ್ಷಣವೇ ಎಮರ್ಜೆನ್ಸಿ ಬಟನ್‌ ಒತ್ತಿ. ಲಿಫ್ಟ್‌ನಲ್ಲಿ ಬೆಳಕಿದ್ದರೆ ಅಲ್ಲಿ ಬರೆದಿರುವ ತುರ್ತು ಸಂಪರ್ಕ ಸಂಖ್ಯೆಗೆ ಕರೆ ಮಾಡಿ

*ಅರೆಕ್ಷಣ ಪರಸ್ಪರರು ಕಣ್ತಪ್ಪಿದರೂ ಜೋರಾಗಿ ಕರೆದು ‘ನಾನು ಇಲ್ಲಿದ್ದೀನಿ’ ಎಂದು ಸಂವಹನ ಮಾಡಿಕೊಳ್ಳುವುದು ಸುರಕ್ಷಿತ

*ಶೌಚಾಲಯದ ಬಾಗಿಲು ತೆರೆಯಲು ಸಾಧ್ಯವಾಗದೇ ಹೋದರೆ ಜೋರಾಗಿ ಬಾಗಿಲು ಬಡಿಯಿರಿ. ನೆರವಿಗಾಗಿ ಕೂಗಿಕೊಳ್ಳಿ.

*ನೀವು ಹೊರಡುವ ಕ್ಷಣದಲ್ಲಿ ವಾಹನ ಸಮೇತ ಸೆಲ್ಫಿ ತೆಗೆದು ನಿಮ್ಮ ಕೆಲವು ಆಪ್ತರೊಂದಿಗೆ ಹಂಚಿಕೊಳ್ಳಿ.

ಮುದ್ದಿನ ಹೆಸರಲ್ಲೇ ಸಂವಹನ ಮಾಡಿ
ಮಾಲ್‌ ಅಥವಾ ಬಹುಮಹಡಿ ಕಟ್ಟಡಗಳಲ್ಲಿ ಲಿಫ್ಟ್‌, ಕೋಣೆಗಳು, ಪ್ರವೇಶದ್ವಾರ, ನಿರ್ಗಮನ ದ್ವಾರಗಳು ಗೊಂದಲ ಸೃಷ್ಟಿಸುವುದುಂಟು. ಮಕ್ಕಳು ಕಣ್ಣಿಗೆ ಬೀಳದಿದ್ದರೆ ಮನೆಯಲ್ಲಿ ಬಳಸುವ ಮುದ್ದಿನ ಹೆಸರಿನ (ನಿಕ್‌ ನೇಮ್‌) ಮೂಲಕ ಕರೆಯಿರಿ. ಬಹುಮಹಡಿ ಕಟ್ಟಡಗಳ ಯಾವುದೇ ಮಹಡಿಯಲ್ಲಿ ನೀವಿದ್ದರೂ ಕೆಳಗಿನ ಮಹಡಿಗಳ ಮೆಟ್ಟಿಲುಗಳು ಕಾಣಿಸುವ ಜಾಗದಲ್ಲಿ ನಿಂತು ಜೋರಾಗಿ ಪರಸ್ಪರರ ಹೆಸರು, ಮುದ್ದಿನ ಹೆಸರು ಹಿಡಿದು ಕರೆಯಿರಿ.

*
ಶಾಪಿಂಗ್‌ ಮಾಲ್‌, ಜಾತ್ರೆ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳು ಕಳೆದುಹೋದಾಗ ತಕ್ಷಣ ಅಲ್ಲಿಯೇ ಧ್ವನಿವರ್ಧಕದಲ್ಲಿ ಪ್ರಕಟಿಸಬೇಕು. ಅಲ್ಲಿ ಲಭ್ಯವಿರುವ ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮಗುವಿನ ಇರುವಿಕೆಯನ್ನು ಪತ್ತೆಹಚ್ಚಬಹುದು. ಈ ಸೌಲಭ್ಯಗಳಿಲ್ಲದಿದ್ದರೆ ಸಮೀಪದ ಪೊಲೀಸ್‌ ಠಾಣೆಗೆ ದೂರು ನೀಡಿ ಫೋಟೊ ಕೊಡಬೇಕು. ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ತಕ್ಷಣ ದೂರು ದಾಖಲಿಸಬೇಕು.
–ಮಂಜುನಾಥ್‌, ಸುಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ (ಮಕ್ಕಳ ಸಹಾಯವಾಣಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT