ಚಿತ್ರದುರ್ಗ: ಜಿಲ್ಲೆಯಾದ್ಯಂತ ರಂಜಾನ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಡಗರ, ಸಂಭ್ರಮದಿಂದ ಆಚರಿಸಿದರು.
ಆತ್ಮ ಶುದ್ಧೀಕರಣ, ಸನ್ನಡತೆಗೆ ಮಾರ್ಗ ತೋರಿಸುವ `ರಂಜಾನ್' ಮುಸ್ಲಿಂ ಸಮುದಾಯಕ್ಕೆ ಪವಿತ್ರ ತಿಂಗಳು. ಈ ಪವಿತ್ರ ತಿಂಗಳಿನಲ್ಲಿ ಮುಸ್ಲಿಮರಿಗೆ ಉಪವಾಸ ವ್ರತ ಅತ್ಯಂತ ಮಹತ್ವದ್ದು. ಈ ವ್ರತ ಅಂತ್ಯಗೊಳಿಸುವ ಮೂಲಕ ಬುಧವಾರ ರಂಜಾನ್ ಹಬ್ಬ ಆಚರಿಸಲಾಯಿತು.
ಬೆಳಿಗ್ಗೆ 11ಕ್ಕೆ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿ ಸಮುದಾಯದವರು ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಬಡವ-ಬಲ್ಲಿದರೆಂಬ ವ್ಯತ್ಯಾಸವಿಲ್ಲದೆ, ನೋವು ಮರೆತು ಎಲ್ಲರೂ ಸಂತಸದಿಂದ ಆಚರಿಸುವ ಮೂಲಕ ಪರಸ್ಪರ ಸಹಕರಿಸುವ ಪವಿತ್ರ ಹಬ್ಬ ರಂಜಾನ್ ಎಂದು ಮುಸ್ಲಿಂ ಧರ್ಮಗುರು ತಿಳಿಸಿದರು.
ವಿವಿಧ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ ಬಂದಿದ್ದ ಮುಸ್ಲಿಂ ಸಮುದಾಯದವರಿಗೆ ಹಬ್ಬದ ಸಂದೇಶವನ್ನೂ ಧರ್ಮಗುರುಗಳು ನೀಡಿದರು.
ಅಗಸನಕಲ್ಲು ಸಮೀಪದ ಮೈದಾನವೂ ಸೇರಿ ಚಿತ್ರದುರ್ಗ ತಾಲ್ಲೂಕಿನ ವಿವಿಧೆಡೆ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಮಾಜಿ ಸಂಸದ ಚಂದ್ರಪ್ಪ, ನಗರಸಭೆ ಸದಸ್ಯ ಗೊಪ್ಪೆ ಮಂಜುನಾಥ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮುಸ್ಲಿಂ ಸಮುದಾಯದ ಮುಖಂಡರಾದ ತಾಜ್ ಪೀರ್, ಸರ್ದಾರ್ ಅಹಮ್ಮದ್ ಪಾಷಾ, ಬಿ.ಕೆ.ರಹಮತ್ ವುಲ್ಲಾ, ಬಾಬೂ, ಖಾದರ್ ಖಾನ್, ಜಾಕೀರ್ ಹುಸೇನ್, ಟಿಪ್ಪು ಖಾಸಿಂ ಆಲಿ ಅವರೂ ಇದ್ದರು.