ಹಿರಿಯೂರು: 14 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗುರುವಾರ ತಾಲ್ಲೂಕು ಪಂಚಾಯಿತಿ ನರೇಗಾ ಹೊರಗುತ್ತಿಗೆ ನೌಕರರು ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
"ನರೇಗಾ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಹಾಯಕರು, ತಾಂತ್ರಿಕ ಸಂಯೋಜಕರು, ಎಂಇಎಸ್ ಸಂಯೋಜಕರು, ಐಇಸಿ, ಗಣಕಯಂತ್ರ ನಿರ್ವಾಹಕರು ಹಾಗೂ ಗ್ರಾಮ ಕೂಲಿ ಸಹಾಯಕರು ವೇತನವಿಲ್ಲದೆ ಪರದಾಡುತ್ತಿದ್ದು, ನಮ್ಮ ನೋವಿಗೆ ಮೇಲಧಿಕಾರಿಗಳು ಹಾಗೂ ಗುತ್ತಿಗೆ ಪಡೆದಿರುವ ಏಜೆನ್ಸಿಯವರು ಸ್ಪಂದಿಸುತ್ತಿಲ್ಲ' ಎಂದು ಆರೋಪಿಸಿದರು.
ತಕ್ಷಣ ವೇತನ ಬಿಡುಗಡೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮ್ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
‘ವೇತನ ವಿಳಂಬಕ್ಕೆ ಕಾರಣವೇನೆಂಬುದನ್ನು ತಿಳಿದು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಧರಣಿ ನಿರತರಿಗೆ ರಾಮ್ಕುಮಾರ್ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ತಾಂತ್ರಿಕ ಸಂಯೋಜಕ ರಮೇಶ್, ಜಗದೀಶ್ ನಾಯ್ಕ್, ಮೋಹನ್ ಕುಮಾರ್, ಕುಶಾಲ್, ಮಂಜುನಾಥ್, ದಿನೇಶ್, ಗಿರಿ, ಗುರುದೇವ್ ಪಾಲ್ಗೊಂಡಿದ್ದರು.