ಚಿತ್ರದುರ್ಗ: ಬಂಟ್ವಾಳ ಬೈಪಾಸಿನಲ್ಲಿರುವ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಕಚೇರಿಗೆ ಬೆಂಕಿ ಇಟ್ಟು, ಧ್ವಂಸಗೊಳಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪಕ್ಷದ ಕಚೇರಿಯಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಂಟ್ವಾಳ ಪಕ್ಷದ ಕಚೇರಿಯ ಮೇಲೆ ನಡೆದ ಕೃತ್ಯವನ್ನು ಖಂಡಿಸಿದರು.
ಸಿಪಿಐ ಕಚೇರಿಗೆ ಬೆಂಕಿ ಹಚ್ಚಿದ್ದರಿಂದ ಪಕ್ಷದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಜತೆಗೆ ಬೀಡಿ ಕಾರ್ಮಿಕರ ಹಾಗೂ ಸಾವಿರಾರು ಕಟ್ಟಡ ಕಾರ್ಮಿಕರ ಅರ್ಜಿಗಳು, ಇತರೆ ಸೌಲಭ್ಯಗಳಿಗೆ ಸಂಬಂಧಿಸಿದ ಅನೇಕ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.
ಇಂತಹ ಸಮಾಜಘಾತುಕ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಸಿ.ವೈ. ಶಿವರುದ್ರಪ್ಪ, ಕಾರ್ಯಕರ್ತರಾದ ಉಮಾಪತಿ, ಸುರೇಶ್ಬಾಬು, ಬಸವರಾಜಪ್ಪ, ಸತ್ಯಕೀರ್ತಿ, ಅಶೋಕ್, ಅತಿಕ್ವುಲ್ಲಾ, ಚಂದ್ರಪ್ಪ ಅವರೂ ಇದ್ದರು.