ಚಿತ್ರದುರ್ಗ: ಪ್ರತಿ ವರ್ಷ ಶ್ರಾವಣ ಬಂದರೆ ಸಾಕು ಹೂವು ಬೆಳೆಯುವ ರೈತರಿಗೆ ಹಬ್ಬ. ಆದರೆ, ಈ ವರ್ಷ ಬೆಳೆಗೆ ರೋಗಬಾಧೆ, ಬೆಲೆ ಕುಸಿತದ ಕಾರಣಕ್ಕೆ ಹೂವು ಬೆಳೆಗಾರರ ಪಾಲಿಗೆ ಸೂತಕ ಆವರಿಸಿದೆ. ಈ ಕಾರಣಕ್ಕೆ ತಾಲ್ಲೂಕಿನ ಹುಣಸೆಕಟ್ಟೆಯಲ್ಲಿ ರೈತರು ನಾನಾ ತಳಿಯ ಸೇವಂತಿಗೆ ಹೂವಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ್ದಾರೆ.
ಹುಣಸೆಕಟ್ಟೆ ಗ್ರಾಮದಲ್ಲಿ ಅತಿ ಹೆಚ್ಚು ಹೂವು ಬೆಳೆಯಲಾಗುತ್ತದೆ. ಶ್ರಾವಣ ಮಾಸ, ಹಬ್ಬದ ದಿನಗಳಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ. ಆದರೆ ಈ ಬಾರಿ ಪ್ರಾರಂಭದಲ್ಲೇ ರೋಗಕಾಣಿಸಿಕೊಂಡಿದ್ದರಿಂದ ಇಳುವರಿ ಕುಂಠಿತವಾಗಿದೆ. ಜತೆಗೆ ಶ್ರಾವಣ ಮಾಸದಲ್ಲಿ ಒಂದು ಮಾರು ಹೂವಿನ ಬೆಲೆ ₹ 30 ಸಹ ದಾಟಲಿಲ್ಲ. ಇದರಿಂದ ಬೇಸತ್ತು ಬೆಳೆಯನ್ನು ನಾಶಗೊಳಿಸಿದ್ದಾರೆ.
‘ಹಬ್ಬದ ಸಮಯದಲ್ಲಿ ಹೂವಿನ ದರ ಏರಿಕೆ ಕಾಣುತ್ತಿತ್ತು. ಆದರೆ ಈ ವರ್ಷ ನಿರೀಕ್ಷೆಗೂ ನಿಲುಕದ ರೀತಿ ಬೆಲೆ ಕುಸಿತಗೊಂಡಿದೆ. ಅರ್ಧ ಎಕರೆ ಹೂವು ಬೆಳೆಯಲು ಅಂದಾಜು ₹ 50 ಸಾವಿರ ವೆಚ್ಚವಾಗುತ್ತದೆ. ಹಾಕಿದ ಬಂಡವಾಳ ಸಹ ವಾಪಸ್ ಬರುವುದು ಕಷ್ಟವಾದ ಕಾರಣ ಬೆಳೆ ನಾಶ ಮಾಡುತ್ತಿದ್ದೇವೆ’ ಎಂದು ಹೂವು ಬೆಳೆಗಾರ ಕಾಂತರಾಜು ಅಳಲು ತೋಡಿಕೊಂಡರು.
ಅನೇಕ ವರ್ಷದಿಂದ ಹುಣಸೆಕಟ್ಟೆಯಲ್ಲಿ ಹೂವು ಬೆಳೆಯುತ್ತಿದ್ದೇವೆ. ಆದರೆ ಯಾವ ವರ್ಷವೂ ಈ ಮಟ್ಟಕ್ಕೆ ಬೆಲೆ ಇಳಿಕೆ ಕಂಡಿರಲಿಲ್ಲ. ಸರ್ಕಾರ ಇತ್ತ ಗಮನಹರಿಸಿ ಪರಿಹಾರ ಕಲ್ಪಿಸಬೇಕು ಎನ್ನುತ್ತಾರೆ ಹೂವು ಬೆಳೆಗಾರರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.