ಚಿತ್ರದುರ್ಗ: ಅನಾರೋಗ್ಯಕ್ಕೆ ಒಳಗಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬಾರದಂತೆ ದೇಹವನ್ನು ಕಾಪಾಡಿಕೊಳ್ಳಬೇಕು. ಉತ್ತಮ ಜೀವನ ಶೈಲಿ ರೂಢಿಸಿಕೊಂಡರೆ ಆರೋಗ್ಯಪೂರ್ಣ ಬದುಕು ನಿಮ್ಮದಾಗುತ್ತದೆ ಎಂದು ರೋಟರಿ ಕ್ಲಬ್ನ ಅಸಿಸ್ಟೆಂಟ್ ಗವರ್ನರ್ ಗಾಯತ್ರಿ ಶಿವರಾಂ ತಿಳಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಚಿತ್ರದುರ್ಗ ರೋಟರಿ ಕ್ಲಬ್ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಮನುಷ್ಯ ಪ್ರತಿ ಕಾರ್ಯಕ್ಕೂ ಯಂತ್ರಗಳನ್ನು ಅವಲಂಬಿಸಿದ್ದಾನೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತಿದೆ. ನಿಯಮಿತ ವ್ಯಾಯಾಮ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ದೇಹವನ್ನು ಸದೃಢವಾಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶಿಬಿರದಲ್ಲಿ 200 ಜನರಿಗೆ ಹೃದ್ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡ ಸಮಸ್ಯೆಗಳ ತಪಾಸಣೆ ಮಾಡಲಾಯಿತು.
ವೈದ್ಯರಾದ ಡಾ.ನಿಷಾನ್, ಡಾ.ಹನುಮಂತಯ್ಯ, ಡಾ.ಅರುಣ್, ಡಾ.ಸುಶ್ಮಿತಾ, ಡಾ.ಇಂದು, ಸಂಚಾಲಕ ರಾಘವೇಂದ್ರ, ಕ್ಲಬ್ನ ಕಾರ್ಯದರ್ಶಿ ಜಯಶ್ರೀ ಷಾ, ವಿಕ್ರಾಂತ್ ಜೈನ್, ವೀರಭದ್ರಸ್ವಾಮಿ, ಚಂದ್ರಮೋಹನ್ ಇದ್ದರು.