ಚಳ್ಳಕೆರೆ: ಮನೆಯಲ್ಲಿ ಬಳಕೆ ಮಾಡಿದ ವಸ್ತು ಹಾಗೂ ಇತರ ಸಾಮಗ್ರಿಗಳನ್ನು ಕಸದ ಬುಟ್ಟಿಗೆ ಹಾಕುವ ಬದಲು ಮರುಬಳಕೆ ಮಾಡಿಕೊಳ್ಳಲು ನಗರಸಭೆಗೆ ನೀಡಬೇಕು ಎಂದು ಪೌರಾಯುಕ್ತ ರಾಮಕೃಷ್ಣ ಸಿದ್ದನಹೊಳ್ಳ ಮನವಿ ಮಾಡಿದರು.
ನಗರಸಭೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ನನ್ನ ಲೈಪ್ ನನ್ನ ಸ್ವಚ್ಛತಾ ನಗರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಡಿದರು.
ಮರುಬಳಕೆ ವಸ್ತುಗಳನ್ನು ಸಂಗ್ರಹಿಸುವ ಸಲುವಾಗಿ ನಗರದ ತ್ಯಾಗರಾಜ ನಗರ, ಬಾಪೂಜಿ ಕಾಲೇಜು, ಸಂತೆ ಮೈದಾನ, ವಾಸವಿ ಶಾಲೆ ಸೇರಿ ನಗರದಲ್ಲಿ 5 ಕಡೆ ಕೇಂದ್ರಗಳನ್ನು ತೆರೆಯಲಾಗಿದೆ. ಸಂಗ್ರಹಸಿದ ವಸ್ತುಗಳನ್ನು ಕಡಿಮೆ ಬಳಕೆ, ಮರುಬಳಕೆ ಹಾಗೂ ಪುನರ್ ಬಳಕೆ ಹೀಗೆ ಮೂರು ಬಗೆಯಲ್ಲಿ ವಿಂಗಡಿಸಲಾಗುವುದು ಎಂದು ಹೇಳಿದರು.
ಮಕ್ಕಳ ಆಟಿಕೆ ಹಾಗೂ ಮರುಬಳಕೆಗೆ ಯೋಗ್ಯವಾದ ಹಳೆ ಪುಸ್ತಕಗಳನ್ನು ನೀಡಿದರೆ ಆ ಪುಸ್ತಕಗಳನ್ನು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಚೆನ್ನಾಗಿರುವ ಬಟ್ಟೆಯನ್ನು ಅನಾಥಶ್ರಮಕ್ಕೆ ನೀಡಲಾಗುವುದು ಎಂದು ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ ಹೇಳಿದರು.
ನಗರಸಭೆ ಸದಸ್ಯ ಎಸ್. ಜಯಣ್ಣ, ರಮೇಶ್ಗೌಡ ಮಾತನಾಡಿದರು. ಮುಖಂಡ ಶಿವಕುಮಾರ್, ಮಂಜುಳಾ, ಪಾಲಮ್ಮ, ಸಾವಿತ್ರಮ್ಮ ಇದ್ದರು.