ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ, ಶಿರಾ ತಾಲ್ಲೂಕಿನ ಬೋರನಕಣಿವೆ, ಬುಕ್ಕಾಪಟ್ಟಣ, ಬೆಳ್ಳಾರ ಪ್ರದೇಶದ ಮೂಲಕ ಹರಿದು ಬರುವ ಸುವರ್ಣಮುಖಿ ನದಿಗೆ ಅಣೆಕಟ್ಟೆ ನಿರ್ಮಿಸಲಾಗಿದೆ. ಮೈಸೂರು ಒಡೆಯರ ಆಳ್ವಿಕೆ ಸಮಯದಲ್ಲಿ ಅಂದು ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವಕೀಲ ಕೆ. ಕೆಂಚಪ್ಪನವರು ಜವನಗೊಂಡನಹಳ್ಳಿ ಕರಿಯಾಲ ಗ್ರಾಮದ ಸಮೀಪ ಜಲಾಶಯ ನಿರ್ಮಿಸಲು ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಆಹ್ವಾನಿಸಿ 1958ರಲ್ಲಿ ಅಡಿಗಲ್ಲು ಹಾಕಿಸಿದ್ದರು. ₹ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಐದೇ ವರ್ಷದಲ್ಲಿ 0.97 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯವನ್ನು ನಿರ್ಮಿಸಿ, ಅದಕ್ಕೆ ಮೈಸೂರು ಒಡೆಯರ್ ಕುಟುಂಬದ ಪುತ್ರಿ ‘ಗಾಯತ್ರಿದೇವಿ’ ಎಂಬ ಹೆಸರಿಡಲಾಗಿದೆ.