ಚಿತ್ರದುರ್ಗ:ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ಕಡೂರು ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಅದೇ ಸಮಯದಲ್ಲಿ ಕಡೂರು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಇಡೀ ರಾತ್ರಿ ಮಳೆ ಬಂದಿದ್ದರಿಂದ ಕರ್ಲಳ್ಳದಲ್ಲಿ ನೀರಿನ ಅರಿವು ಹೆಚ್ಚಾಗಿದೆ. ಎರಡು ವರ್ಷಗಳ ನಂತರ ಹಳ್ಳದಲ್ಲಿ ಇಷ್ಟೊಂದು ನೀರು ಹರಿದು ಬಂದಿರುವುದು ರೈತರಲ್ಲಿ ಸಂತಸ ಕಂಡು ಬಂದಿದೆ.
ಹೊಸದುರ್ಗ ತಾಲ್ಲೂಕಿನ ಗೂಳಿಹಟ್ಟಿ, ದೊಡ್ಡಘಟ್ಟಹಳ್ಳ ಸುಮಾರು 30 ವರ್ಷದ ಬಳಿಕ ಭಾನುವಾರ ರಾತ್ರಿ ಸುರಿದ ಮಹಾಮಳೆಗೆ ಮೈದುಂಬಿ ಹರಿಯುತ್ತಿದೆ.
ಹೊಸದುರ್ಗ ತಾಲ್ಲೂಕಿನ ಗೂಳಿಹಟ್ಟಿ, ದೊಡ್ಡಘಟ್ಟ ಹಳ್ಳ ಸುಮಾರು 30 ವರ್ಷದ ಬಳಿಕ ಭಾನುವಾರ ರಾತ್ರಿ ಸುರಿದ ಮಹಾಮಳೆಗೆ ಮೈದುಂಬಿ ಹರಿಯುತ್ತಿದ್ದು, ಸುಮಾರು ಒಂದು ಕಿ ಮೀ ವ್ಯಾಪ್ತಿಯವರೆಗೂ ರಸ್ತೆಯ ಮೇಲೆಲ್ಲಾ ನೀರು ಹರಿಯುತ್ತಿದೆ. ಜಮೀನುಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಈ ಭಾಗದ ಕೆರೆಗಳು, ಬ್ಯಾರೇಜ್ ಗಳು ಭರ್ತಿಯಾಗಿ ವಾಣಿವಿಲಾಸ ಜಲಾಶಯಕ್ಕೆ ಭಾರೀ ನೀರು ಹರಿಯುತ್ತಿದೆ. ಹೊಸದುರ್ಗ ತಾಲ್ಲೂಕಿನ ಮಾರಬಘಟ್ಟ ಹಳ್ಳ ದಶಕದ ಬಳಿಕ ಮೈದುಂಬಿ ಹರಿಯುತ್ತಿದೆ. ಆದ್ರಿಕಟ್ಟೆ ಕೆರೆ ಒಡೆದು ಹೋಗಿದೆ.