ಮೊಳಕಾಲ್ಮುರು: ನೂತನವಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ದಿಕ್ಕು ತಪ್ಪಿಸಲು ಕೇಂದ್ರದ ಬಿಜೆಪಿಸರ್ಕಾರ ಹುನ್ನಾರ ನಡೆಸಿದೆ ಎಂದು ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಮುಖಂಡರು ಆರೋಪಿಸಿದರು.
ಶನಿವಾರ ಪ್ರತಿಭಟನೆ ನಡೆಸಿದ ಸಂಘದ ಕಾರ್ಯಕರ್ತರು ಎರಡು ತಿಂಗಳಿನಿಂದ ಕಾಯ್ದೆಗಳನ್ನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ.ಹೋರಾಟದ ಕಾವು ಏರುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಪ್ರತಿಭಟನೆ ದಿಕ್ಕು ತಪ್ಪಿಸಲು ಗಣರಾಜ್ಯೋತ್ಸವ ದಿನ ನಡೆದ ಪ್ರತಿಭಟನೆಯಲ್ಲಿ ಕೆಲ ಖಾಸಗಿ ವ್ಯಕ್ತಿಗಳನ್ನು ನುಗ್ಗಿಸಿ ಕೆಂಪುಕೋಟೆ ಮೇಲೆ ಬೇರೆ ಧ್ವಜ ಹಾರಾಡುವ ಕೆಲಸ ಮಾಡಿಸಿದೆ. ಇದು ಇಡೀ ದೇಶಕ್ಕೆ ಮಾಡಿರುವ ಅವಮಾನ. ಇಂತಹ ಕುತಂತ್ರಗಳನ್ನು ಕೈಬಿಟ್ಟು ಕೂಡಲೇ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಕೃಷಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಕೇಂದ್ರ ಮತ್ತು ರಾಜ್ಯಸರ್ಕಾರ ಈಗ ಮಂಡಿಸಲಿರುವ ಬಜೆಟ್ನಲ್ಲಿರೈತರು ಹಾಗೂ ಕೃಷಿ ಕಾರ್ಮಿಕರ ಸಾಲ ಮನ್ನಾ ಮಾಡಬೇಕು. ಸರಳ ದಾಖಲಾತಿಯೊಂದಿಗೆ ಹೊಸ ಸಾಲ ನೀಡಬೇಕು. ಸಾಲ ಮನ್ನಾಕ್ಕೆ ಕಾಲಮಿತಿ ಹಾಕಿ ಮನ್ನಾ ಮಾಡಬೇಕು. ಬಾಕಿ ಇರುವ ಬೆಳೆವಿಮೆ ತಕ್ಷಣ ಬಿಡುಗಡೆ ಮಾಡಬೇಕು. ಭದ್ರಾಮೇಲ್ದಂಡೆ ಕಾರ್ಯಕ್ಕೆ ಚುರುಕು ನೀಡಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ನೋಂದಣಿಗೆ ಕಾನೂನು ಸಡಿಲಿಸಬೇಕು. ಸಾಮಾಜಿಕ ಪಿಂಚಣಿಯ ವೇತನವನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.