ಹಿರಿಯೂರು: ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ 2020–21ನೇ ಸಾಲಿಗೆ ವಿವಿಧ ಬಾಬ್ತುಗಳಿಗೆ ನಡೆದ ಸಾರ್ವಜನಿಕ ಹರಾಜಿನಲ್ಲಿ ದಿನವಹಿ ಸುಂಕ ಸಂಗ್ರಹವನ್ನು ಇ. ಆನಂದಪ್ಪ ಎಂಬುವವರು ₹ 14 ಲಕ್ಷಕ್ಕೆ ಪಡೆದರು.
ವಾರದ ಸಂತೆಯೂ ಕೂಡ ₹ 11.51 ಲಕ್ಷಕ್ಕೆ ಆನಂದಪ್ಪ ಅವರಿಗೆ ದೊರೆಯಿತು. ಕೃಷ್ಣಮೂರ್ತಿ ಎಂಬುವವರು ಖಾಸಗಿ ಬಸ್ ನಿಲ್ದಾಣವನ್ನು ₹ 2.6 ಲಕ್ಷಕ್ಕೆ, ವೇದಾವತಿ ಬಡಾವಣೆಯ ಸಂತೆಯನ್ನು ₹ 6.51 ಲಕ್ಷಕ್ಕೆ ಪಡೆದರು. ನಗರದಲ್ಲಿನ ಒಟ್ಟು 12 ಎಳನೀರು ಮಾರುವ ಕೇಂದ್ರಗಳು ₹ 3.16 ಲಕ್ಷಕ್ಕೆ ಬೇರೆ ಬೇರೆಯವರಿಗೆ ಹರಾಜಾದವು.
ಹರಾಜಿನ ನೇತೃತ್ವ ವಹಿಸಿದ್ದ ಪೌರಾಯುಕ್ತ ಶಿವಪ್ರಸಾದ್, ‘ಗ್ರಾಮೀಣ ಪ್ರದೇಶದಿಂದ ತರಕಾರಿ, ಹೂವು ತರುವ ರೈತರಿಗೆ ಕಿರುಕುಳ ನೀಡಬಾರದು. ಹಿಂದಿನ ಹರಾಜಿನ ಹಣ ಪಾವತಿಸಿಲ್ಲದವರಿಗೆ ಮತ್ತೆ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡುವುದಿಲ್ಲ. ಹಬ್ಬ–ಹರಿದಿನ, ಮುಷ್ಕರಗಳ ಸಂದರ್ಭದಲ್ಲಿ ಉಂಟಾಗಬಹುದಾದ ನಷ್ಟಕ್ಕೆ ನಗರಸಭೆ ಹೊಣೆಯಾಗದು. ತೇರುಮಲ್ಲೇಶ್ವರಸ್ವಾಮಿ ಜಾತ್ರೆಗೆ ಎರಡು ವಾರದ ಸಂತೆ ಬಿಟ್ಟು ಕೊಡಬೇಕಾಗುತ್ತದೆ’ ಎಂದು ತಿಳಿಸಿದರು.
‘ಎಳನೀರು ವ್ಯಾಪಾರಿಗಳು ಕತ್ತರಿಸಿದ ಭಾಗವನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಅಂದಂದಿನ ಚಿಪ್ಪುಗಳನ್ನು ಹರಾಜು ಪಡೆದವರೇ ಸಾಗಿಸಬೇಕು. ನಗರದಲ್ಲಿ ಸ್ವಚ್ಛತೆ ಕಾಪಾಡಲು ಎಲ್ಲರ ಸಹಕಾರ ಅಗತ್ಯ’ ಎಂದು ಅವರು ಹೇಳಿದರು.
ನಗರಸಭಾ ಸದಸ್ಯರಾದ ಜೆ.ಆರ್. ಅಜ್ಜಣ್ಣ, ಎಂ.ಡಿ. ಸಣ್ಣಪ್ಪ, ಮಹೇಶ್ ಪಲ್ಲವ, ಎಸ್.ಪಿ.ಟಿ. ದಾದಾಪೀರ್, ಮಾಜಿ ಸದಸ್ಯ ಚಿರಂಜೀವಿ, ಕಂದಾಯ ಅಧಿಕಾರಿ ಲೀಲಾವತಿ, ಲೆಕ್ಕ ಅಧೀಕ್ಷಕ ಮೆಹಬೂಬ್ ಆಲಿ ಇದ್ದರು.