ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಬಗ್ಗೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.
‘ಸದಸ್ಯ ರಾಷ್ಟ್ರಗಳೆಲ್ಲವೂ ತಮ್ಮ ನಾಗರಿಕರ ಹಿತರಕ್ಷಣೆ ಮಾಡಬೇಕು ಎಂಬುದು ಗುಟೆರಸ್ ಅವರ ಆಶಯ’ ಎಂದು ವಕ್ತಾರ ಸ್ಟೀಫನ್ ಡುಜಾರಿಕ್ ಸುದ್ದಿಗಾರರಿಗೆ ಸೋಮವಾರ ತಿಳಿಸಿದ್ದಾರೆ.
ಅಕ್ರಮ ಒಳನುಸುಳುವಿಕೆ ತಡೆಯಲು ಭಾರತೀಯ ಸೇನೆ ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ 13 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇದೇ ವೇಳೆ, ಮೂವರು ಸೈನಿಕರು ಹಾಗೂ ನಾಲ್ಕು ಮಂದಿ ನಾಗರಿಕರೂ ಸಾವನ್ನಪ್ಪಿದ್ದರು. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಕಳವಳ ವ್ಯಕ್ತಪಡಿಸಿದ್ದಾರೆ.
‘ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸಲು ಗುಟೆರಸ್, ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ನಾಗರಿಕರು ಯಾವುದೇ ದೇಶದವರಾಗಿರಲಿ, ಅವರಿಗೆ ರಕ್ಷಣೆ ಸಿಗಬೇಕು ಎಂಬುದೇ ವಿಶ್ವಸಂಸ್ಥೆಯ ಮೂಲ ಆಶಯ’ ಎಂದು ಡುಜಾರಿಕ್ ಹೇಳಿದ್ದಾರೆ.
ಇದೇ ವೇಳೆ, ‘ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಕುರಿತು ಚರ್ಚಿಸುವಯಾವುದೇ ಪ್ರಸ್ತಾವ ಇಲ್ಲ’ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷ ರಾಷ್ಟ್ರವಾದ ಪೆರುವಿನ ಕಾಯಂ ರಾಯಭಾರಿ ಗಸ್ಟಾವೊ ಮೆಜಾ ಕ್ವಾಡ್ರಾ ಹೇಳಿದ್ದಾರೆ.