ಚಿತ್ರದುರ್ಗ: ನಗರದ ಚರ್ಚ್ ಹಿಂಭಾಗದ ಬೀದಿ ಬದಿಯಲ್ಲಿ ನಿರ್ಮಿಸಿದ ನೀರಿನ ತೊಟ್ಟಿಗೆ ಶುಕ್ರವಾರ ಆಯತಪ್ಪಿ ಬಿದ್ದಿದ್ದ ಕುದುರೆಯನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ರಕ್ಷಿಸಿದರು.
ಚರ್ಚ್ ಹಿಂಭಾಗದ ಬೀದಿಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ನೀರಿನ ತೊಟ್ಟಿ ನಿರ್ಮಿಸಲಾಗಿದೆ. 10 ಅಡಿಗೂ ಹೆಚ್ಚು ಆಳದ ಈ ತೊಟ್ಟಿಯ ಮೇಲೆ ಶೀಟುಗಳನ್ನು ಮುಚ್ಚಲಾಗಿತ್ತು. ಶುಕ್ರವಾರ ನಸುಕಿನಲ್ಲಿ ಬಂದ ಕುದುರೆ ಆಯತಪ್ಪಿ ತೊಟ್ಟಿಯೊಳಗೆ ಬಿದ್ದಿತ್ತು.
ತೊಟ್ಟಿಯಲ್ಲಿ ಸುಮಾರು 3 ಅಡಿಯಷ್ಟು ನೀರು ಇದ್ದರಿಂದ ಕುದುರೆಗೆ ತೊಂದರೆ ಆಗಲಿಲ್ಲ. ಆದರೆ, ಮೇಲೆ ಏರಲು ಸಾಧ್ಯವಾಗದೇ ಪರದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಗರಸಭೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೌರಕಾರ್ಮಿಕರು ಕುದುರೆ ಮೇಲೆತ್ತಲು ಹರಸಾಹಸಪಟ್ಟರು.
ಜೆಸಿಬಿ ಯಂತ್ರದ ಸಹಾಯದಿಂದ ಕುದುರೆ ಮೇಲೆತ್ತುವ ಪ್ರಯತ್ನವೂ ನಡೆಯಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಕುದುರೆಯ ದೇಹಕ್ಕೆ ಬೆಲ್ಟ್ ಬಿಗಿದು ಮೇಲೆತ್ತಿದರು. ಸಮೀಪದಲ್ಲೇ ಇದ್ದ ಮತ್ತೊಂದು ಕುದುರೆ, ರಕ್ಷಣೆ ಕಾರ್ಯಾಚರಣೆಯನ್ನು ವೀಕ್ಷಿಸಿತು.