ಚಿತ್ರದುರ್ಗ: ‘ಮಂಡಿ ನೋವು ಹೊರತುಪಡಿಸಿ ನಾನೂ ಆರೋಗ್ಯವಾಗಿದ್ದೇನೆ. ಬರವಣಿಗೆಯಲ್ಲಿ ಎಂದಿನಂತೆ ಸಕ್ರಿಯವಾಗಿದ್ದೇನೆ. ಯಾರು ಆತಂಕಪಡುವ ಅಗತ್ಯವಿಲ್ಲ’ ಎಂದು ಕಾದಂಬರಿಕಾರ ಡಾ.ಬಿ.ಎಲ್.ವೇಣು ತಿಳಿಸಿದ್ದಾರೆ.
‘ತಾತ್ವಿಕ ಭಿನ್ನಾಭಿಪ್ರಾಯ ಬದಿಗೊತ್ತಿ ನಾನೂ ಅನಾರೋಗ್ಯದಲ್ಲಿದ್ದೇನೆ ಎಂದು ತಿಳಿದು ಈಚೆಗೆ ನಮ್ಮ ಮನೆಗೆ ಬಂದು ಸಾಂತ್ವನಿಸಿದ ಶಿವಮೂರ್ತಿ ಮುರುಘಾ ಶರಣರ ವಿಶ್ವಾಸಕ್ಕೆ ನಾನೂ ಅಬಾರಿಯಾಗಿದ್ದೇನೆ. ಅವರ ಭೇಟಿ ನಂತರ ಅನೇಕರು ದೂರವಾಣಿ ಮೂಲಕ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಜನರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ’ ಎಂದು ತಿಳಿಸಿದ್ದಾರೆ.
‘ಜಿಲ್ಲೆಯ ಜನತೆ, ಓದುಗ ಅಭಿಮಾನಿಗಳು, ಸಾಹಿತ್ಯ ಮಿತ್ರರು, ಹಿತೈಷಿಗಳು ಆತಂಕದಿಂದ ಮನೆಗೂ ಧಾವಿಸುತ್ತಿದ್ದಾರೆ. ನನ್ನ ಮೇಲೆ ತೋರುತ್ತಿರುವ ಕಾಳಜಿಗೆ ಸದಾ ಋಣಿಯಾಗಿದ್ದೇನೆ. ಆರೋಗ್ಯವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಅವರು ಕೋರಿದ್ದಾರೆ.