ಹಿರಿಯೂರು: ನಗರದ ಪ್ರವಾಸಿ ಮಂದಿರ ವೃತ್ತದಲ್ಲಿನಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ದಶಕಗಳ ನಂತರ ಉದ್ಘಾಟನೆ ಭಾಗ್ಯ ಸಿಕ್ಕಿದೆ.
ಸಂಘಟನೆಗಳ ಭಿನ್ನಾಭಿಪ್ರಾಯದ ಕಾರಣ ದಶಕಗಳಿಂದ ಉದ್ಘಾಟನೆ ಕಾಣದ ಪ್ರತಿಮೆಯನ್ನು ಡಾ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಭಾನುವಾರ ಅನಾವರಣಗೊಳಿಸಲಾಯಿತು.
ಹಿರಿಯ ದಲಿತ ಮುಖಂಡ, ನಗರಸಭೆ ಮಾಜಿ ಸದಸ್ಯ ಜಿ. ಧನಂಜಯಕುಮಾರ್, ‘ಅಂಬೇಡ್ಕರ್ ಕೇವಲ ದಲಿತರಿಗೆ, ತುಳಿತಕ್ಕೆ ಒಳಗಾದವರಿಗೆ ಮಾತ್ರವಲ್ಲ, ಎಲ್ಲ ವರ್ಗಗಳಲ್ಲಿನ ಶೋಷಿತರಿಗೆ ಸಂವಿಧಾನದತ್ತವಾದ ನ್ಯಾಯ ಕಲ್ಪಿಸಿದ್ದಾರೆ. ಪ್ರತಿಮೆ ವಿವಾದ ಅವರ ಪರಿನಿರ್ವಾಣ ದಿನದಂದು ಅಂತ್ಯಗೊಂಡಿದ್ದು ಶುಭಕರ. ಭವಿಷ್ಯದಲ್ಲಿ ಎಲ್ಲ ದಲಿತ ಸಂಘಟನೆಗಳು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ದಮನಿತರ ಏಳಿಗೆಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿ.ಡಿ. ರಾಜಗಿರಿ, ‘ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ಕೊಟ್ಟ ಕೀರ್ತಿ ಅಂಬೇಡ್ಕರ್ಗೆ ಸಲ್ಲುತ್ತದೆ’ ಎಂದರು.
ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಬಬ್ಬೂರು ಪರಮೇಶ್ವರಪ್ಪ ಮಾದಿಗ, ದಲಿತ ಮುಖಂಡ ಹುಚ್ಚವ್ವನಹಳ್ಳಿ ವೆಂಕಟೇಶ್, ಗೌತಮ ಬುದ್ಧ ಪ್ರತಿಷ್ಠಾನದ ಅಧ್ಯಕ್ಷ ಟಿ. ಜಗನ್ನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂ.ಡಿ. ರವಿ, ವಿ.ಎಚ್. ರಾಜು, ವೀರಭದ್ರಸ್ವಾಮಿ, ಎಚ್.ಕೆ. ಕಲ್ಲೇಶಪ್ಪ, ರಾಘವೇಂದ್ರ, ಧೃವಕುಮಾರ್, ಲಕ್ಷ್ಮೀದೇವಿ, ಗಂಗಮ್ಮ, ಶಾರದಮ್ಮ ಇದ್ದರು.