ಚಿತ್ರದುರ್ಗ: ಅಡಿಕೆ ವ್ಯಾಪಾರಿ ಉದಯ ಶೆಟ್ಟಿ ಅವರ ಮನೆ ಹಾಗೂ ಅಡಿಕೆ ಮಂಡಿಯ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಉದಯ ಶೆಟ್ಟಿ ಅವರು ಮನೆಯಲ್ಲಿ ಇಲ್ಲದ ಪರಿಣಾಮ ಜೆಸಿಆರ್ ಬಡಾವಣೆಯ 6ನೇ ಕ್ರಾಸಿನಲ್ಲಿರುವ ಅವರ ಮನೆಗೆ ಸೋಮವಾರ ಬೀಗ ಮುದ್ರೆ ಮಾಡಲಾಗಿದೆ.
ಹುಬ್ಬಳ್ಳಿಯಿಂದ ನಗರಕ್ಕೆ ಬಂದ ಅಧಿಕಾರಿಗಳ ತಂಡ ಹಳೆ ಬೆಂಗಳೂರು ರಸ್ತೆಯಲ್ಲಿರುವ ಶ್ರೀಗುರು ಕೋಗುಂಡೇಶ್ವರ ಟ್ರೇಡರ್ಸ್ ಹಾಗೂ ಮನೆಯ ಮೇಲೆ ದಾಳಿ ನಡೆಸಿತು. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಲೆಕ್ಕಪರಿಶೋಧಕರನ್ನು ವಿಚಾರಣೆಗೆ ಒಳಪಡಿಸಿತು. ಕೆಲ ಕಡತಗಳನ್ನು ವಶಕ್ಕೆ ಪಡೆಯಿತು.
ಉದಯ ಅವರು ಮನೆಯಲ್ಲಿ ಇಲ್ಲದ ಪರಿಣಾಮ ಅಧಿಕಾರಿಗಳು ಕಾದುಕುಳಿತರು. ಅಡಿಕೆ ವ್ಯಾಪಾರಿ ಬಾರದೇ ಇರುವುದರಿಂದ ಮನೆಗೆ ಬೀಗ ಹಾಕಿ ಮೊಹರುಮಾಡಲಾಗಿದೆ. ‘ಅನುಮತಿ ಇಲ್ಲದೇ ಮನೆಯ ಬಾಗಿಲು ತೆರೆಯುವಂತಿಲ್ಲ’ ಎಂದು ಗೇಟ್ ಹಾಗೂ ಮನೆಯ ಮುಂಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ.
ಮೂಲತಃ ಕಡೂರಿನ ಉದಯ ಶೆಟ್ಟಿ ಹಲವು ವರ್ಷಗಳಿಂದ ಚಿತ್ರದುರ್ಗದಲ್ಲಿ ನೆಲೆಸಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಅಡಿಕೆ ಮಂಡಿ ಹೊಂದಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪ ಇವರ ಮೇಲಿದೆ. ಸ್ಥಳೀಯ ಪೊಲೀಸರು ಐಟಿ ಅಧಿಕಾರಿಗಳಿಗೆ ಭದ್ರತೆ ಒದಗಿಸಿದ್ದರು.