ಮೊಳಕಾಲ್ಮುರು: ‘ದೇಶದಲ್ಲಿ ಶ್ರೀರಾಮ ಓಡಾಡಿರುವ ಸ್ಥಳಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಶ್ರೀರಾಮ ಸರ್ಕೀಟ್ ಯೋಜನೆ’ಯಲ್ಲಿ ತಾಲ್ಲೂಕಿನ ಐತಿಹಾಸಿಕ ಜಟ್ಟಂಗಿ ರಾಮೇಶ್ವರ ಬೆಟ್ಟವನ್ನು ಸೇರ್ಪಡೆ ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಶಾಸಕ ಬಿ. ಶ್ರೀರಾಮುಲು ಭರವಸೆ ನೀಡಿದರು.
ತಾಲ್ಲೂಕಿನ ದೇವಸಮುದ್ರ ಹೋಬಳಿಯ ಜಟ್ಟಂಗಿ ರಾಮೇಶ್ವರ ಬೆಟ್ಟಕ್ಕೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
ಬೆಟ್ಟದಲ್ಲಿ ಜಟಾಯು ಪಕ್ಷಿ ಸಮಾಧಿ ಇದೆ. ಶ್ರೀರಾಮ ಪ್ರತಿಷ್ಠಾಪನೆ ಮಾಡಿದ್ದ ಎನ್ನಲಾದ ದೇವಸ್ಥಾನವಿದೆ. ಸಾಕಷ್ಟು ಇತಿಹಾಸ ಹೊಂದಿರುವ ಈ ಸ್ಥಳವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆ ನಿರ್ಲಕ್ಷ್ಯ ಮಾಡಿದೆ. ಮುಂದಿನ ದಿನಗಳಲ್ಲಿ ಇದನ್ನು ಉತ್ತಮ ಪ್ರೇಕ್ಷಣಿಯ ಸ್ಥಳವನ್ನಾಗಿ ಮಾಡಲು 'ಸರ್ಕೀಟ್' ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.
‘ನನ್ನ ಅನುದಾನದಲ್ಲಿ ಬೆಟ್ಟದ ತಪ್ಪಲಿನಿಂದ ಬೆಟ್ಟದ ವರೆಗೆ ಇರುವ ಮೆಟ್ಟಿಲುಗಳಿಗೆ ಕಂಬಿ ನಿರ್ಮಾಣಕ್ಕೆ ಹಾಗೂ ಬೆಟ್ಟದಲ್ಲಿ ಸಮುದಾಯ ಭವನ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ. ಪ್ರವಾಸೋದ್ಯಮ ಇಲಾಖೆ ಮೂಲಕ ಸಾಧ್ಯವಿರುವ ಕೆಲಸಗಳನ್ನು ಮಾಡಿಸಲು ಮುಂದಾಗುತ್ತೇನೆ’ ಎಂದು ಹೇಳಿದರು.