ಹೊಸದುರ್ಗ: ‘ಕೆಲ್ಲೋಡು ಕನಕ ಗುರುಪೀಠದಲ್ಲಿ ಸುಮಾರು ₹ 13 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳು ಆರಂಭವಾಗಿವೆ’ ಎಂದು ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕೆಲ್ಲೋಡು ಗ್ರಾಮದ ಕನಕ ಗುರುಪೀಠದಲ್ಲಿ ಶುಕ್ರವಾರ ಮಹಾದ್ವಾರಗಳ ಉದ್ಘಾಟನೆ ಹಾಗೂ ಕನಕ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ನೂತನ ಶ್ರೀಮಠದ ಕಟ್ಟಡ, ವಿದ್ಯಾಕೇಂದ್ರ, ಕನಕ ಏಕಶಿಲಾ ವಿಗ್ರಹ ಕಾಮಗಾರಿಗಳು ಪ್ರಗತಿಯಲ್ಲಿವೆ. ಶ್ರಾವಣ ಭಿಕ್ಷೆ ಮೂಲಕ ಹಣ ಸಂಗ್ರಹ ಮಾಡಲಾಗುತ್ತಿದೆ. ಶೀಘ್ರದಲ್ಲಿ ಕನಕ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುವುದು. ವೇದಾವತಿ ನದಿ ತಪ್ಪಲಿನಲ್ಲಿ ಶ್ರೀಮಠ ಇರುವುದು ಅಭಿವೃದ್ಧಿಯ ಸಂಕೇತ’ ಎಂದು ತಿಳಿಸಿದರು.
ಕಾಗಿನೆಲೆ ಮಹಾಸಂಸ್ಥಾನದ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ‘ಶ್ರೀಮಠದ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಭಕ್ತರ ಸಹಕಾರ ನೀಡಬೇಕು. ಕನಕದಾಸರ ಸಾಹಿತ್ಯವನ್ನು ಪ್ರಚುರ ಪಡಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಕನಕದಾಸರ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದ್ದರು’ ಎಂದು ಸ್ಮರಿಸಿದರು.
ಶ್ರೀಮಠದ ದಾನಿ ಶಾಂತಮ್ಮ ಲಕ್ಕಣ್ಣ ಗೌಡರು ಅವರು ಮಹಾದ್ವಾರವನ್ನು ಉದ್ಘಾಟಿಸಿದರು.
ಮಹಾದ್ವಾರದ ಲೋಕಾರ್ಪಣೆ ಅಂಗವಾಗಿ ಕಲಶ ಸ್ಥಾಪನೆ, ಹೋಮ ಹವನ ನಡೆಯಿತು. ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ, ಕನಕ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನಡೆದವು.
ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ನಾಗೇನಹಳ್ಳಿ ಮಂಜುನಾಥ್, ಎಂಎಲ್ಸಿ ಚೌಡರೆಡ್ಡಿ ತೂಪಲ್ಲಿ, ಕನಕ ಬ್ಯಾಂಕ್ ಉಪಾಧ್ಯಕ್ಷ ಡಾ.ಹನುಮಂತಪ್ಪ, ಬೆಂಗಳೂರು ಕನಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ.ಬೆಳಗಾವಿ ಇದ್ದರು.