ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ | ಕರಿಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ ನಾಳೆ

ರಾಮಗಿರಿಗೆ ಭಕ್ತರ ದಂಡು, ಪವಾಡ ಪುರುಷನಿಗೆ ಬಾಳೆಹಣ್ಣು ರಾಶಿಯ ನೈವೇದ್ಯ
Last Updated 4 ಡಿಸೆಂಬರ್ 2022, 7:42 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ರಾಮಗಿರಿಯಲ್ಲಿ ಡಿ. 5ರಂದು ಕರಿಸಿದ್ದೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದೆ.

ಮಧ್ಯ ಕರ್ನಾಟಕದ ದೊಡ್ಡ ಉತ್ಸವಗಳಲ್ಲಿ ರಾಮಗಿರಿ ಲಕ್ಷದೀಪೋತ್ಸವವೂ ಒಂದು. ಜಾತ್ರೆಗೆ ರಾಮಗಿರಿ ಪಟ್ಟಣ ಸಜ್ಜುಗೊಂಡಿದೆ. ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ದೀಪೋತ್ಸವದ ಅಪೂರ್ವ ದೃಶ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಸೋಮವಾರ ರಾತ್ರಿ ಗ್ರಾಮಕ್ಕೆ ಹೊಂದಿಕೊಂಡಿರುವ ಕರಿಸಿದ್ದೇಶ್ವರ ಸ್ವಾಮಿಯ ಬೆಟ್ಟದ ತುಂಬ ಎಣ್ಣೆ,
ಬತ್ತಿಗಳ ದೀಪಗಳಿಂದ ಅಲಂಕರಿಸಲಾಗುತ್ತದೆ. ಬೆಟ್ಟದ ತುದಿಯಲ್ಲಿ ದೇವಾಲಯ ಇದ್ದು, ಅಲ್ಲಿಯವರೆಗೆ ಇರುವ 300ಕ್ಕೂ ಹೆಚ್ಚು ಮೆಟ್ಟಿಲುಗಳ ಎರಡೂ ಬದಿಗಳಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ. ರಾತ್ರಿ ವೇಳೆ ಇಡೀ ಬೆಟ್ಟ ದೀಪಗಳಿಂದ ಕಂಗೊಳಿಸುತ್ತದೆ.

ಮಂಗಳವಾರ ಬೆಳಗಿನ ಜಾವ ಕರಿಸಿದ್ದೇಶ್ವರ ಸ್ವಾಮಿಯನ್ನು ಬೆಟ್ಟದಿಂದ ಕೆಳಗೆ ಕರೆ ತರಲಾಗುತ್ತದೆ. ಬಾಳೆ ದಿಂಡುಗಳಲ್ಲಿ ಕಲಾತ್ಮಕವಾಗಿ ನಿರ್ಮಿಸುವ ಕದಳಿ ಮಂಟಪದಲ್ಲಿ ಕರಿಸಿದ್ದೇಶ್ವರ ಸ್ವಾಮಿ, ಕರಿಯಮ್ಮ ದೇವಿ, ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಡೀ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ನಡೆಯಲಿವೆ.

ದೇವರ ಮುಂದೆ ಬಾಳೆಹಣ್ಣು ರಾಶಿ:

ಕರಿಸಿದ್ದೇಶ್ವರ ಸ್ವಾಮಿ ಜಾತ್ರೆಯನ್ನು ಬಾಳೆಹಣ್ಣು ಪರಿಷೆ ಎಂದೇ ಕರೆಯಲಾಗುತ್ತದೆ. ದೇವರ ಮುಂದೆ ಬಾಳೆಹಣ್ಣುಗಳ ರಾಶಿ ಹಾಕುವುದು ಇಲ್ಲಿನ ವಿಶೇಷಗಳಲ್ಲಿ ಒಂದು. ಭಕ್ತರು ತಮ್ಮ ಇಷ್ಟಾನುಸಾರ ‘ನೂರಾ ಒಂದು, ಐನೂರ ಒಂದು, ಸಾವಿರದ ಒಂದು…’ ಹೀಗೆ ಬಾಳೆಹಣ್ಣು ನೀಡುವುದಾಗಿ ಹರಕೆ ಹೊರುತ್ತಾರೆ. ಭಕ್ತರು ಕೊಟ್ಟ ಬಾಳೆಹಣ್ಣುಗಳನ್ನು ದೇವರ ಮುಂದೆ ರಾಶಿ ಹಾಕಲಾಗುತ್ತದೆ. ಈ ರಾಶಿ ಸುಮಾರು 10 ರಿಂದ 15 ಅಡಿ ಎತ್ತರ ಇರುತ್ತದೆ. ಹಣ್ಣುಗಳನ್ನು ರಾಶಿ ಹಾಕಿದ ನಂತರ ಪೂಜೆ ಸಲ್ಲಿಸಿ ಭಕ್ತರಿಗೆ ಹಂಚಲಾಗುತ್ತದೆ. ಇದರೊಂದಿಗೆ ನೆನೆಸಿದ ಕಡಲೆ ಕಾಳು ವಿತರಿಸಲಾಗುತ್ತದೆ. ಜಾತ್ರೆಯಲ್ಲಿ ಬಾಳೆ ಹಣ್ಣು ಮಾರಾಟ ಜೋರಾಗಿರುತ್ತದೆ. ವ್ಯಾಪಾರಿಗಳು ಮಾರಾಟಕ್ಕೆಂದೇ ಟನ್‌ಗಟ್ಟಲೆ ಬಾಳೆಹಣ್ಣು ತರಿಸಿ ಮಾರಾಟ ಮಾಡುತ್ತಾರೆ. ‘ದೇವರಿಗೆ ಬಾಳೆಹಣ್ಣು ಅರ್ಪಿಸಿಲ್ಲವೆಂದರೆ ಪೂಜೆ ಪೂರ್ಣಗೊಳ್ಳುವುದಿಲ್ಲ’ ಎಂಬ ನಂಬಿಕೆ ಭಕ್ತರದು.

ಕಾಲಜ್ಞಾನಿ ಗಂಗಮ್ಮನ ಬಾವಿ:

ಬೆಟ್ಟದ ಮೇಲಿನ ಕರಿಸಿದ್ದೇಶ್ವರ ಸ್ವಾಮಿ ದೇವಾಲಯದ ಒಳಗೆ ಗಂಗಮ್ಮನ ಬಾವಿ ಇದ್ದು, ಇದನ್ನು ‘ಕಾಲಜ್ಞಾನಿ ಬಾವಿ’ ಎಂದೇ ನಂಬಲಾಗಿದೆ. ಬೆಟ್ಟದ ತುದಿಯಲ್ಲಿದ್ದರೂ, ಈ ಬಾವಿಯ ನೀರು ಎಂದೂ ಬತ್ತಿಲ್ಲ. ಇದು ಭವಿಷ್ಯ ನುಡಿಯುವ ಬಾವಿಯಾಗಿದ್ದು, ಇದರಲ್ಲಿನ ನೀರು ಸ್ವಲ್ಪ ಕೆಳಗೆ ಹೋದರೆ ಆ ವರ್ಷ ಹೆಚ್ಚು ಮಳೆ ಬರುತ್ತದೆ, ನೀರು ಮೇಲೆ ಬಂದರೆ ಮಳೆಗಾಲ ಕಡಿಮೆ ಆಗುತ್ತದೆ. ಈ ನೀರು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ' ಎನ್ನುತ್ತಾರೆ ಇಲ್ಲಿನ ಅರ್ಚಕರು.

‘ಕರಿ’ ಬದುಕಿಸಿದ ಕರಿಸಿದ್ದೇಶ್ವರ ಇಲ್ಲಿನ ಕರಿಸಿದ್ದೇಶ್ವರ ಸ್ವಾಮಿಯನ್ನು ಭಕ್ತರು ಪವಾಡ ಪುರುಷನೆಂದೇ ನಂಬಿದ್ದಾರೆ. ದೇವರ ಪವಾಡಗಳ ಬಗ್ಗೆ ಹಿರಿಯರು ಅನೇಕ ದಂತಕತೆಗಳನ್ನು ಹೇಳುತ್ತಾರೆ.

‘ಹಿಂದೆ ರಾಜನೊಬ್ಬ ಈ ಭಾಗದಲ್ಲಿ ಬೀಡು ಬಿಟ್ಟಿರುತ್ತಾನೆ. ಅವನ ಪ್ರೀತಿಯ ಆನೆ ಅನಾರೋಗ್ಯದಿಂದ ಸಾವನ್ನಪ್ಪುತ್ತದೆ. ದಿಕ್ಕು ತೋಚದಂತಾದ ರಾಜ ಆನೆಯನ್ನು ಬದುಕಿಸುವಂತೆ ದೇವರಲ್ಲಿ ಬೇಡುತ್ತಾನೆ. ಆಗ ದೇವರು ಸಾಧುವೊಬ್ಬನ ವೇಷದಲ್ಲಿ ಅಲ್ಲಿಗೆ ಬರುತ್ತದೆ. ಸಾಧು ವೇಷ ಧರಿಸಿದ ದೇವರು ತನ್ನ ಮಂತ್ರದಂಡದಿಂದ ಆನೆಯನ್ನು ಮುಟ್ಟಿದಾಗ ಅದು ಎದ್ದು ನಿಲ್ಲುತ್ತದೆ. ಕರಿ(ಆನೆ)ಯನ್ನು ಬದುಕಿಸಿದ್ದರಿಂದ ಕರಿಸಿದ್ದೇಶ್ವರ ಎಂಬ ಹೆಸರು ಬಂತು’ ಎನ್ನುತ್ತಾರೆ ಗ್ರಾಮದ ಹಿರಿಯರು.

****

ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಕಾರ್ತಿಕೋತ್ಸವ ನಡೆಯಲಿದೆ. ಬೆಟ್ಟಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ್ದು, ಎಲ್ಲ ಸಿದ್ಧತೆಗಳು ಮುಗಿದಿವೆ.

-ರಾಮಗಿರಿ ರಾಮಣ್ಣ, ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT