ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ಕೋಡಿ ಬಿದ್ದ ಗಾಯತ್ರಿ ಜಲಾಶಯ

ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪ
Last Updated 4 ಆಗಸ್ಟ್ 2022, 4:34 IST
ಅಕ್ಷರ ಗಾತ್ರ

ಹಿರಿಯೂರು: ಮೈಸೂರು ಒಡೆಯರ ಕಾಲದಲ್ಲಿ ನಿರ್ಮಾಣಗೊಂಡಿರುವ ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪದ ಗಾಯತ್ರಿ ಜಲಾಶಯ ಹಿಂದಿನ 10–12 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭರ್ತಿಯಾಗಿದ್ದು, ಬುಧವಾರ ಸಂಜೆ 28ನೇ ಬಾರಿಗೆ ಕೋಡಿ ಬೀಳುವ ಮೂಲಕ ಹೋಬಳಿಯ ರೈತರಲ್ಲಿ ಸಂತಸ ಮೂಡಿಸಿದೆ.

ಹಿಂದಿನ ವರ್ಷ ನವೆಂಬರ್‌ 21 ರಂದು ಜಲಾಶಯ ಕೋಡಿ ಹರಿದಿತ್ತು. ಈ ವರ್ಷ ಮುಂಗಾರು ಮಳೆಗೇ ಭರ್ತಿಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಸಿರಾ ತಾಲ್ಲೂಕಿನ ಬೋರನಕಣಿವೆ, ಬುಕ್ಕಾಪಟ್ಟಣ, ಬೆಳ್ಳಾರ ಪ್ರದೇಶದ ಮೂಲಕ ಹರಿದು ಬರುವ ಹತ್ತಾರು ಹಳ್ಳಗಳು ಸೇರಿ ಮುಂದೆ ಸಾಗಿ ಬರುವ ಸುವರ್ಣಮುಖಿ ನದಿಗೆ ಅಣೆಕಟ್ಟೆ ನಿರ್ಮಿಸಲಾಗಿದೆ. ಮೈಸೂರು ಒಡೆಯರ ಆಳ್ವಿಕೆ ಸಮಯದಲ್ಲಿ ಅಂದು ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವಕೀಲ ಕೆ. ಕೆಂಚಪ್ಪನವರು ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮದ ಸಮೀಪ ಜಲಾಶಯ ನಿರ್ಮಿಸಲು ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಆಹ್ವಾನಿಸಿ 1958ರಲ್ಲಿ ಅಡಿಗಲ್ಲು ಹಾಕಿಸಿದ್ದರು. ಕೇವಲ
₹ 40 ಲಕ್ಷ ವೆಚ್ಚದಲ್ಲಿ ಐದೇ ವರ್ಷದಲ್ಲಿ 0.97 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯವನ್ನು ನಿರ್ಮಿಸಿ, ಅದಕ್ಕೆ ಮೈಸೂರು ಒಡೆಯರ್ ಕುಟುಂಬದ ಪುತ್ರಿ ‘ಗಾಯತ್ರಿದೇವಿ’ ಎಂಬ ಹೆಸರಿಡಲಾಗಿದೆ.

ಜಲಾಶಯದ ಪೂರ್ಣಮಟ್ಟ 145 ಅಡಿ ಇದ್ದು, 6,000 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಜವನಗೊಂಡನಹಳ್ಳಿ ಹೋಬಳಿಯ 39 ಹಳ್ಳಿಗಳಿಗೆ ₹ 19.14 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಪ್ರಗತಿಯಲ್ಲಿದೆ. ಸಿರಾ ತಾಲ್ಲೂಕಿನ ಹುಣಿಸೇಹಳ್ಳಿ, ಉಜ್ಜನಕುಂಟೆ ಮೊದಲಾದ ಗ್ರಾಮಗಳಿಗೆ ಇದೇ ಜಲಾಶಯದಿಂದ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

1970ರಿಂದ 75 ರವರೆಗೆ, 1978, 1980, 1981, 1982, 1985, 1987 ರಿಂದ 1993 ರವರೆಗೆ, 1998 ರಿಂದ 2002 ರವರೆಗೆ, 2006, 2011, 2016, 2017 ರಲ್ಲಿ ಎರಡು ಬಾರಿ ಹಾಗೂ 2021 ರಲ್ಲಿ ಜಲಾಶಯ ಕೋಡಿ ಬಿದ್ದಿದೆ. ಸತತ ಎರಡನೇ ವರ್ಷ ಕೋಡಿ ಹರಿಯುತ್ತಿರುವುದು ಹಿರಿಯೂರು ಮತ್ತು ಸಿರಾ ತಾಲ್ಲೂಕಿನ ರೈತರಲ್ಲಿ ಸಂತಸ ಉಂಟು ಮಾಡಿದೆ. ಜಲಾಶಯ ಭರ್ತಿಯಾಗಿ ಅಣೆಕಟ್ಟೆಯ ಮೇಲಿಂದ ಬಳುಕುತ್ತ ಧುಮ್ಮಿಕ್ಕುವ ದೃಶ್ಯ ಶಿವಮೊಗ್ಗ ಸಮೀಪ ಇರುವ ತುಂಗಾ ಅಣೆಕಟ್ಟೆಯ ನೆನಪು ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT