ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಕಬ್ಬಳ ಗ್ರಾಮದ ರೈತ ದಂಪತಿಯ ಪುತ್ರಿ ಕೆ.ಎಂ.ಸಿಂಚನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಮಂಜುನಾಥ ಹಾಗೂ ಶಾಂತಮ್ಮ ದಂಪತಿ ಪುತ್ರಿ ಸಿಂಚನಾ, ಗ್ರಾಮದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದರು. ಬಳಿಕ ನೀರಗುಂದ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು.
'ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇತ್ತು. ತಪ್ಪಿಲ್ಲದೇ ಪರೀಕ್ಷೆ ಬರೆದಿದ್ದರಿಂದ 625 ಅಂಕ ಸಿಗಬಹುದು ಎಂಬ ನಂಬಿಕೆ ಇತ್ತು. ಈ ಫಲಿತಾಂಶ ನಿರೀಕ್ಷಿತ' ಎಂದು ಸಿಂಚನಾ 'ಪ್ರಜಾವಾಣಿ'ಯೊಂದಿಗೆ ಸಂತಸ ಹಂಚಿಕೊಂಡರು.
'ನಿತ್ಯ ನಸುಕಿನ 5 ಗಂಟೆಗೆ ಎದ್ದು ಅಧ್ಯಯನ ಮಾಡುತ್ತಿದ್ದೆ. ಕಷ್ಟದ ವಿಷಯಗಳನ್ನು ನಸುಕಿನಲ್ಲಿ ಹಾಗೂ ಇತರ ವಿಷಯಗಳನ್ನು ಸಂಜೆ ಬಳಿಕ ಓದುತ್ತಿದ್ದೆ. ಶಾಲೆಯ ಶಿಕ್ಷಕರು ಪ್ರೇರಣೆ ನೀಡುತ್ತಿದ್ದರು' ಎಂದು ಅಭಿಪ್ರಾಯ ಹಂಚಿಕೊಂಡರು.