ಚಿತ್ರದುರ್ಗ: ನಗರದ ಮುರುಘಾಮಠದಲ್ಲಿ ಶೂನ್ಯಪೀಠದ ಪ್ರಥಮಾಧ್ಯಕ್ಷ ಅಲ್ಲಮಪ್ರಭುದೇವರ ಸ್ಮರಣೆ ಮತ್ತು ಭಾರತೀಯ ನೂತನ ವರ್ಷಾರಂಭ ಯುಗಾದಿ ಅಂಗವಾಗಿ ರಾಜ್ಯ ಮಟ್ಟದ ಕವಿಗೋಷ್ಠಿ ಈಚೆಗೆ ನಡೆಯಿತು.
ಶಿವಮೂರ್ತಿ ಮುರುಘಾ ಶರಣರು, ‘ಅಲ್ಲಮನ ಬದುಕನ್ನು ಶಿವಯೋಗ ಸಾಧಕ, ಕವಿ (ಚಿಂತಕ) ಮತ್ತು ವಿಮರ್ಶಕ ಎಂದು ಮೂರು ಹಂತದಲ್ಲಿ ಗುರುತಿಸಬಹುದು. ಶಿವಯೋಗ ಸಾಧನೆ ಅಲ್ಲಮನ ಆಪ್ತವಾದ ಅಭ್ಯಾಸವಾಗಿತ್ತು' ಎಂದರು.
'ಅಲ್ಲಮನ ಒಳಗೆ ಒಬ್ಬ ಅನ್ವೇಷಕ ಇದ್ದ. ಸಮಾಜವನ್ನು ಸರಿದಾರಿಗೆ ತರಬೇಕು ಎಂಬ ಪ್ರಯತ್ನ ಮಾಡಿದರು' ಎಂದು ತಿಳಿಸಿದರು.
ತುಮಕೂರಿನ ಕವಿ ಪ್ರೊ.ಕೆ.ಬಿ.ಸಿದ್ದಯ್ಯ, ‘ಅಲ್ಲಮನ ಸ್ಮರಣೆ ಎಂದರೆ ಕನ್ನಡದ ಮಣ್ಣನ್ನು ಬಹುಬಗೆಯಾಗಿ ಕಾಣುವುದು. ಸಹಜವಾದುದನ್ನು ಅಲ್ಲಮ ನುಡಿಯುತ್ತಾರೆ. ಅವರ ಸ್ಮರಣೆ ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ' ಎಂದರು.
'ನಾಗಾರ್ಜುನನ ತರ್ಕ ಮತ್ತು ಬುದ್ಧನಿಂದಅಲ್ಲಮ ಪ್ರಭಾವಿತರಾಗಿದ್ದರು. ಅವರ ಜ್ಞಾನದ ಅನ್ವೇಷಣೆ ವಿಜ್ಞಾನವನ್ನು ಮೀರಿದ್ದು, ಅಲ್ಲಮಪ್ರಭು ನೇರ ನಡೆ– ನುಡಿಯಲ್ಲಿ ಕಟ್ಟಿದ ಚಿಂತನೆ ಅಪಾರವಾದುದು' ಎಂದರು.
ನಾಡಿನ ವಿವಿಧ ಭಾಗಗಳಿಂದ ಕವಿಗೋಷ್ಠಿಗೆ ಆಗಮಿಸಿದ್ದ ಕವಿಗಳು ಕವನಗಳನ್ನು ವಾಚಿಸಿದರು.