ಹೊಸದುರ್ಗ: ತಾಲ್ಲೂಕಿನ ಕಸಬಾ ಹೋಬಳಿ ಬುರುಡೇಕಟ್ಟೆ ಗ್ರಾಮದ ರಂಗನಾಥಸ್ವಾಮಿ ಬೆಟ್ಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಸೋಮವಾರ ನಸುಕಿನಲ್ಲಿ ಚಿರತೆ ಸೆರೆಯಾಗಿದೆ.
ಸುಮಾರು 3 ವರ್ಷದ ಚಿರತೆ ಈ ಭಾಗದಲ್ಲಿ ಮೂರ್ನಾಲ್ಕು ತಿಂಗಳಿನಿಂದಲೂ ಕಾಣಿಸಿಕೊಂಡಿತ್ತು. ಇದರಿಂದ ಜನರು ಆತಂಕದಲ್ಲಿದ್ದರು. ರೈತರು ಜಮೀನಿಗೆ ಹೋಗಲು ಭಯಪಡುತ್ತಿದ್ದರು. ಜನರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದರು.
ಬೋನಿನೊಳಗೆ ಹಸು ಕಟ್ಟಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸೆರೆಯಾದ ಚಿರತೆ ನೋಡಲು ಜನರು ತಂಡೋಪ ತಂಡವಾಗಿ ಬಂದಿದ್ದರು. ಅಧಿಕಾರಿಗಳು ಚಿರತೆಯನ್ನು ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸಾಗಿಸಿದರು.