ಚಿತ್ರದುರ್ಗ: ‘ದೇಶ ರಾಮರಾಜ್ಯ ಆಗಬೇಕು ಎಂಬುದು ಅನೇಕ ಮಹನೀಯರ ಕನಸು. ಅದನ್ನು ನನಸಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದರೆ ಖಂಡಿತ ಸಾಧ್ಯವಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಶನಿವಾರ ಸರಳವಾಗಿ ಆಯೋಜಿಸಿದ್ದ ‘ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
‘ರಾಮಾಯಣ ಮಹಾಕಾವ್ಯ ಬರೆದ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ಆದರ್ಶಯುತ ಜೀವನ ನಡೆಸಿದ್ದಾರೆ. ಮಾನವರಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೇ ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ. ಅವುಗಳನ್ನು ತಿದ್ದಿಕೊಂಡು ಸುಸಂಸ್ಕೃತರಾಗಬೇಕಿದೆ. ಅದಕ್ಕಾಗಿ ಇಂತಹ ಮಹನೀಯರ ತತ್ವಾದರ್ಶ ಬದುಕಿನುದ್ದಕ್ಕೂ ಅನುಸರಿಸಬೇಕಿದೆ’ ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ‘ವಾಲ್ಮೀಕಿ ರಚಿಸಿದ ರಾಮಾಯಣ ಮಹಾನ್ ಗ್ರಂಥಕ್ಕೆ ದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಮಹತ್ವದ ಸ್ಥಾನವಿದೆ. ಇದು ಮನುಕುಲಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾಗಿದ್ದು, ಅದರಲ್ಲಿರುವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಯೋಗೇಶ, ‘ವಾಲ್ಮೀಕಿ ವಿಶ್ವಕ್ಕೆ ಭಾರತದ ಸಂಸ್ಕೃತಿಯನ್ನು ಪರಿಚಯಿಸಿಕೊಟ್ಟಿದ್ದಾರೆ. ಅವರ ಆದರ್ಶ ಅಳವಡಿಸಿಕೊಂಡಲ್ಲಿ ಬದುಕಿಗೆ ದಾರಿದೀಪವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನ, ತಹಶೀಲ್ದಾರ್ ವೆಂಕಟೇಶಯ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಟಿ. ಪರಮೇಶ್ವರಪ್ಪ ಇದ್ದರು.