ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಮದ್ಯ ಮಾರಾಟ ಬಂದ್, ನೀರಾಕ್ಕೆ ಬೇಡಿಕೆ ಹೆಚ್ಚಿಸಿದ ಕೊರೊನಾ

Last Updated 8 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮೊಳಕಾಲ್ಮುರು:ಕೋವಿಡ್-19 ಭೀತಿಯಿಂದ ಲಾಕ್‌ಡೌನ್ ಮಾಡಿರುವ ಕಾರಣ ಮದ್ಯ ಅಂಗಡಿಗಳು ಮುಚ್ಚಿವೆ. ಇದರಿಂದ ನೀರಾಕ್ಕೆ ವ್ಯಾಪಕ ಬೇಡಿಕೆ ಬಂದಿದೆ.

ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಕೃಷಿಕ ಎಸ್.ಸಿ. ವೀರಭದ್ರಪ್ಪ ಅವರ ತೋಟದಲ್ಲಿ ಲಾಕ್‌ಡೌನ್ ನಂತರ ನೀರಾಮಾರಾಟ ಹೆಚ್ಚಿದೆ.ತೆಂಗಿನಮರದ ಹೊಂಬಾಳೆಯಿಂದ ಇಳಿಸುವ ನೀರಾ ಹಲವು ಪೌಷ್ಠಿಕಾಂಶಗಳನ್ನು ಹೊಂದಿದೆ. ಎಳನೀರಿಗಿಂತಲೂ ಇದು ಉತ್ತಮ ಪೇಯ ಎಂದು ಪ್ರಚಾರ ನಡೆಸಿದ್ದರೂ ಜನರು ಅಷ್ಟಾಗಿ ಇತ್ತ ಗಮನ ಕೊಟ್ಟಿರಲಿಲ್ಲ. ಆದರೆ ಕೊರೊನಾ ಬಂದ ನಂತರ ಬೇಡಿಕೆ ಹಲವು ಪಟ್ಟು ಏರಿದ್ದು, ಅಗತ್ಯದಷ್ಟುಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದು ರೈತರ ಮಾತು.

ಬೆಂಗಳೂರು- ಬಳ್ಳಾರಿ ರಾಜ್ಯಹೆದ್ದಾರಿಗೆ ಹೊಂದಿಕೊಂಡಿರುವ ‘ವಸುಂಧರಾ ಸಸ್ಯಕ್ಷೇತ್ರ‘ ಮುಂಭಾಗದಲ್ಲಿ ನೀರಾ ಮಾರಾಟಕ್ಕೆ ಶೆಡ್ ನಿರ್ಮಿಸಲಾಗಿದೆ. ಅಲ್ಲಿಬೆಳಿಗ್ಗೆ ಹಾಗೂ ಸಂಜೆ ಸರದಿಯಲ್ಲಿ ನಿಂತು ಜನರು ನೀರಾ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ 200 ಮಿ.ಲೀಟರ್‌ಗೆ ₹ 50ರಂತೆ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಹಾಗೂ ಹೊರಜಿಲ್ಲೆಯವರು ಬಂದು ಕೊಂಡುಕೊಳ್ಳುತ್ತಿದ್ದಾರೆ ಅಲ್ಲಿನ ಸಿಬ್ಬಂದಿ ತಿಳಿಸಿದರು.

‘ತೋಟದಲ್ಲಿ 40 ಮರಗಳಿಂದ ನೀರಾ ಇಳಿಸಲಾಗುತ್ತಿದೆ. ಮೂರುವರ್ಷಗಳಿಂದ ನೀರನ್ನು ವೈಜ್ಞಾನಿಕವಾಗಿ ಇಳಿಸಿ, ಸಂಸ್ಕರಣೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಎಲ್ಲಾ ಹಂತದಲ್ಲೂ ವೈಜ್ಞಾನಿಕತೆ ಕಾಪಾಡಲಾಗಿದೆ.ಐಸ್ ಚೇಂಬರ್ ಬಳಸಲಾಗುತ್ತಿದೆ. ಬ್ಯಾಕ್ಟೀರಿಯಾ ಆದಲ್ಲಿ ಮಾತ್ರ ನೀರಾ ಹುಳಿಯಾಗಿ ಹೆಂಡವಾಗುತ್ತದೆ. ಇಲ್ಲದಿದ್ದರೆ ಪೌಷ್ಟಿಕಾಂಶದ ಪೇಯ’ ಎಂದು ಸಸ್ಯಕ್ಷೇತ್ರ ಮಾಲೀಕ ಎಸ್.ಸಿ. ವೀರಭದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಮರಗಳಿಂದ ನೀರಾ ಇಳಿಸಲು ಮುಂದಾಗಿದ್ದೇವೆ. ಮರ ಹತ್ತಿ ಇಳಿಸುವ ಬಗ್ಗೆ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದೆ.ನೀರಾ ಇಳಿಸುವುದು ಎಳನೀರು, ತೆಂಗಿನಕಾಯಿ ಮಾರಾಟಕ್ಕಿಂತ ಹೆಚ್ಚು ಲಾಭದಾಯಕ. ಎಲ್ಲಾ ತೆಂಗಿನ ಬೆಳೆಗಾರರು ಇದರತ್ತ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.

ದುಪ್ಪಟ್ಟು ದರ:ಮದ್ಯದಂಗಡಿಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಮದ್ಯವನ್ನು ಬೇಕಾಬಿಟ್ಟಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ತಾಲ್ಲೂಕು ಇದಕ್ಕೆ ಹೊರತಾಗಿಲ್ಲ.ನಿಗದಿತ ದರಕ್ಕಿಂತ 4-5 ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗುತ್ತಿದೆ. ಇದು ನೀರಾ ಬೇಡಿಕೆಗೆ ಒತ್ತು ನೀಡಿದೆ ಎಂಬ ಮಾತು ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದವೀರಭದ್ರಪ್ಪ,‘ಮದ್ಯವ್ಯಸನಿಗಳು ನೀರಾವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಟ್ಟಿಲ್ಲ. ಕೊಡುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT