ಚಿತ್ರದುರ್ಗ: ‘ಇತಿಹಾಸ ಮರೆಯಲಾಗದ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಆಡಳಿತದ 60 ವರ್ಷದ ಅವಧಿಯಲ್ಲಿ ಆಗಿದೆ’ ಎಂದು ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ ಹೇಳಿದರು.
ತಾಲ್ಲೂಕಿನ ಜಾನಕೊಂಡ, ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ನಿಂದ ಸೋಮವಾರ ಆಯೋಜಿಸಿದ್ದ ಪ್ರಾಜೆಕ್ಟ್ ಪ್ರತಿನಿಧಿ ಅಭಿಯಾನದಲ್ಲಿ ಮಾತನಾಡಿದರು.
‘ದೇಶದಲ್ಲಿ ಸ್ಥಾಪನೆ ಆಗಿರುವ ವಿಶ್ವವಿದ್ಯಾಲಯ, ಬೃಹತ್ ಅಣೆಕಟ್ಟೆ, ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಜಿಲ್ಲೆ–ರಾಜ್ಯ ಸಂಪರ್ಕಿಸುವ ರಸ್ತೆ, ಮಾಹಿತಿ ಮತ್ತು ತಂತ್ರಜ್ಞಾನ, ಉಳುವವನೇ ಭೂಮಿಯ ಒಡೆಯ ಹೀಗೆ.. ಹಲವು ಕಾರ್ಯಕ್ರಮ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಮತ್ತು ರಾಜೀವ್ಗಾಂಧಿ ಅವಧಿಯಲ್ಲಿ ಆಗಿವೆ. ಆದರೂ ಕಾಂಗ್ರೆಸ್ ಏನು ಮಾಡಿದೆ ಎಂಬುದಾಗಿ ಪ್ರಶ್ನಿಸುವ ಬಿಜೆಪಿ ನಾಯಕರಿಗೆ ಆಡಳಿತ ಜ್ಞಾನವಿಲ್ಲ’ ಎಂದು ಕಿಡಿಕಾರಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ‘ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ರಾಜಕೀಯ ದುರುದ್ದೇಶದಿಂದ ವಿರೋಧಿಸುವುದನ್ನು ಬಿಟ್ಟು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಉತ್ತಮ ದಿನಗಳು ಬರಲಿವೆ ಎಂಬುದಾಗಿ ಭರವಸೆ ನೀಡಿರುವ ಈಗಿನ ಪ್ರಧಾನಿ ಮೋದಿ ಮಾತು ಉಳಿಸಿಕೊಳ್ಳಲಿ. ಇಲ್ಲದಿದ್ದರೆ, ಮುಂಬರುವ ಚುನಾವಣೆಯಲ್ಲಿ ಜನರೇ ಪಾಠ ಕಲಿಸಲಿದ್ದಾರೆ’ ಎಂದರು.
ಮುಖಂಡರಾದ ಕೆ.ಪಿ. ಸಂಪತ್ಕುಮಾರ್, ಡಿ.ಎನ್. ಮೈಲಾರಪ್ಪ, ಬಿ.ಟಿ. ಜಗದೀಶ್, ಲಕ್ಷ್ಮಿಕಾಂತ್, ಗಂಜಿಗಟ್ಟೆ ಮಧು, ಸೈಯದ್ ಅಲ್ಲಾಬಕಷ್, ಎಚ್.ಅಂಜಿನಪ್ಪ, ಮೋಹನ್ ಪೂಜಾರಿ, ಆರ್. ಅಶೋಕ್ ನಾಯ್ಡು, ಜೆ.ಎನ್.ಕೋಟೆ ತಿಪ್ಪೇಸ್ವಾಮಿ, ಆರ್. ಗಂಗಾಧರ್, ಆರತಿ ಮಹಡಿ ಶಿವಮೂರ್ತಿ, ಮಮತಾ ನೇರ್ಲಿಗೆ ಇದ್ದರು.