ಮೊಳಕಾಲ್ಮುರು:ತಾಲ್ಲೂಕಿನಾದ್ಯಂತ ಬುಧವಾರ ರಾಮನವಮಿಯನ್ನು ಸರಳವಾಗಿ ಆಚರಿಸಲಾಯಿತು.
ಐತಿಹಾಸಿಕ ಹಿನ್ನೆಲೆಯ ಬಾಂಡ್ರಾವಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ 800 ವರ್ಷಗಳ ಹಿಂದೆ ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿದ್ದಾರೆ ಎನ್ನಲಾದ ರಾಮ, ಸೀತೆ, ಲಕ್ಷ್ಮಣ ವಿಗ್ರಹಗಳನ್ನು ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಚಿಕ್ಕೇರಹಳ್ಳಿ ಮತ್ತು ಕೊಂಡ್ಲಹಳ್ಳಿ ಸಮೀಪದ ಮಾರಮ್ಮನಹಳ್ಳಿಯಲ್ಲಿ ರಾಮನವಮಿ ಅಂಗವಾಗಿ ಜರುಗಬೇಕಾಗಿದ್ದ ರಥೋತ್ಸವಗಳನ್ನು ತಾಲ್ಲೂಕು ಆಡಳಿತದ ಸೂಚನೆಯಂತೆ ರದ್ದುಪಡಿಸಲಾಗಿದೆ. ದೇವಸ್ಥಾನದಲ್ಲಿ ಸಾಂಕೇತಿಕ ಆಚರಣೆ, ಪೂಜೆ ವಿಧಿ ವಿಧಾನಗಳನ್ನು ಮಾತ್ರ ಮಾಡಲಾಯಿತು.
ಹಲವು ಗ್ರಾಮಗಳಲ್ಲಿ ನವಮಿಯ ಸಂಜೆ ಬೆಲ್ಲದ ಪಾನಕ, ಕೋಸಂಬರಿ ಹಂಚುವುದು ವಾಡಿಕೆಯಾಗಿದೆ. ಕೊರೊನಾ ಕಾರಣ ಸಾಂಕೇತಿಕವಾಗಿ ಹಂಚಲಾಯಿತುಎಂದು ಗ್ರಾಮಸ್ಥ ಮಂಜುನಾಥ್, ರಾಮಣ್ಣ ಹೇಳಿದರು.