ಚಿತ್ರದುರ್ಗ: ಪಂಡಿತ್ ಶ್ಯಾಮ್ಪ್ರಸಾದ್ ಮುಖರ್ಜಿ ಅವರ ಸ್ಮರಣಾರ್ಥ ಬಿಜೆಪಿ ಜಿಲ್ಲಾ ಘಟಕ ವೃಕ್ಷಾರೋಹಣ ಆರಂಭಿಸಿದೆ. ಇದರ ಅಂಗವಾಗಿ ಇಲ್ಲಿನ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ಬುಧವಾರ ನಡೆದ ಬೀಜದುಂಡೆ ತಯಾರಿಕೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.
ಹೊಂಗೆ, ಹಲಸು, ನೇರಳೆ ಹಣ್ಣಿನ 20 ಸಾವಿರಕ್ಕೂ ಅಧಿಕ ಬೀಜದ ಉಂಡೆಗಳನ್ನು ತಯಾರಿಸಲಾಗುತ್ತಿದೆ. ಅವುಗಳನ್ನು ಜೋಗಿಮಟ್ಟಿ ಅರಣ್ಯ ಪ್ರದೇಶ, ಚಂದ್ರವಳ್ಳಿ, ಆಡುಮಲ್ಲೇಶ್ವರ ಕಿರು ಮೃಗಾಲಯದ ಸುತ್ತ ಹಾಕಲಾಗುತ್ತದೆ.
‘ಅಭಿವೃದ್ಧಿ ಹೆಸರಿನಲ್ಲಿ ಅನೇಕ ವರ್ಷಗಳಿಂದಲೂ ಬೃಹದಾಕಾರವಾಗಿ ಬೆಳೆದ ಮರಗಳನ್ನು ಕಡಿಯಲಾಗುತ್ತಿದೆ. ಅದೇ ಸ್ಥಳದಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸುವ ಕಾರ್ಯವಾಗಬೇಕು. ಈ ಮೂಲಕ ಅರಣ್ಯ ಪ್ರದೇಶ ಹೆಚ್ಚಿಸಬೇಕಿದೆ’ ಎಂದು ನಾರಾಯಣಸ್ವಾಮಿ ಹೇಳಿದರು.
‘ಶುದ್ಧ ಗಾಳಿ ನಮಗೆ ಪ್ರಕೃತಿಯಲ್ಲಿನ ಮರ–ಗಿಡಗಳಿಂದ ಮಾತ್ರ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಮರಗಳನ್ನು ಬೆಳೆಸಿ–ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ. ಉತ್ತಮ ಪರಿಸರ ಮಾನವನ ಆರೋಗ್ಯ ವೃದ್ಧಿಗೂ ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.