ಚಿತ್ರದುರ್ಗ: ಜೀವನದಲ್ಲಿ ಹಣ ಮುಖ್ಯವಲ್ಲ ಆರೋಗ್ಯ ಮುಖ್ಯ ಎಂಬುದನ್ನು ಕೊರೊನಾ ಸೋಂಕು ಅರ್ಥಪಡಿಸಿದೆ. ಆರೋಗ್ಯ ಕಾಪಾಡಿಕೊಳ್ಳುವತ್ತ ಎಲ್ಲರೂ ಗಮನ ಹರಿಸಬೇಕು ಎಂದು ಮುರುಘ ಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.
ತಾಲ್ಲೂಕಿನ ಸಲಬೊಮ್ಮನಹಳ್ಳಿಯಲ್ಲಿ ನಡೆದ ‘ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ‘ಆರೋಗ್ಯ ಕಾಪಾಡಿಕೊಳ್ಳುವ ಹಾದಿ’ ಕುರಿತು ಮಾತನಾಡಿದ ಅವರು, ‘ಔಷಧ ಇಲ್ಲದೇ ಜೀವನ ನಡೆಸುವವರೇ ಆರೋಗ್ಯವಂತರು’ ಎಂದು ಹೇಳಿದರು.
‘ಹಣ ಗಳಿಸಬೇಕೆಂಬ ಹಂಬಲದಿಂದ ಜನರು ಸಾಗುತ್ತಿದ್ದರು. ಹಣ ಶಾಶ್ವತವಲ್ಲ, ಅದು ಮುಂದೊಂದು ದಿನ ದುಃಖ ತರುತ್ತದೆ ಎಂಬುದು ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಮನವರಿಕೆಯಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಗಮನ ಹರಿಸಬೇಕು. ಆಹಾರದ ವಿಧಾನವನ್ನು ಸುಧಾರಿಸಿಕೊಳ್ಳಬೇಕು’ ಎಂದು ಕವಿಮಾತು ಹೇಳಿದರು.
‘ಮಾನವ ಯಂತ್ರದ ಮೇಲೆ ಹೆಚ್ಚು ಅವಲಂಬಿತನಾಗಿದ್ದಾನೆ. ಇದರಿಂದ ಶ್ರಮ ಕಡಿಮೆಯಾಗಿದ್ದು, ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಹೆಚ್ಚು ಲಾಭ ಗಳಿಸಬೇಕು ಎಂಬ ಹಪಹಪಿಕೆ ಹೆಚ್ಚಾಗಿದೆ. ಕೃತಕ ಜೀವನ ಪದ್ಧತಿ ಬೆಳೆಯುತ್ತಿದೆ. ಸಹಜವಾದ ಜೀವನ ಕ್ರಮ ಅಳವಡಿಸಿಕೊಂಡು ಪ್ರಕೃತಿ ಜೊತೆಯಲ್ಲಿ ಬದುಕಬೇಕು. ಆಗ ಯಾವುದೇ ಕಾಯಿಲೆ ಬರುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಆಹಾರ ಕ್ರಮ ಸುಧಾರಣೆ ಕಾಣಬೇಕು. ಸಾತ್ವಿಕ ಆಹಾರ ತೆಗೆದುಕೊಳ್ಳಬೇಕು. ಎಣ್ಣೆ ಅಂಶದ ಪದಾರ್ಥ, ಕರಿದ ಪದಾರ್ಥಗಳು ದೇಹಕ್ಕೆ ಒಳ್ಳೆಯದಲ್ಲ. ಸಿಹಿ ಪ್ರಮಾಣ ಕಡಿಮೆ ಮಾಡಿಕೊಳ್ಳಬೇಕು. ಹಸಿಯದೇ ಊಟ ಮಾಡಬಾರದು. ಆಹಾರವೇ ಔಷಧವಾಗಬೇಕು’ ಎಂದು ಹೇಳಿದರು.
ಎನ್.ಆರ್.ಪುರ ಬಸವಕೇಂದ್ರದ ಬಸವಯೋಗಪ್ರಭು ಸ್ವಾಮೀಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ಮಹೇಶ್ ಚಕ್ರಸಾಲಿ, ಮಲ್ಲಿಕಾರ್ಜುನಪ್ಪ ಇದ್ದರು.