ಚಿತ್ರದುರ್ಗ: ಮೂಲಭೂತ ಶಕ್ತಿಗಳು ಅಧಿಕಾರದಲ್ಲಿ ಮುಂದುವರಿದರೆ ಮೀಸಲಾತಿಯನ್ನು ರದ್ದುಪಡಿಸುವ ಅಪಾಯವಿದೆ. ಇದರ ವಿರುದ್ಧದ ಹೋರಾಟಕ್ಕೆ ಭೀಮ ಪರಿವಾರ ಸಜ್ಜಾಗಬೇಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಸಲಹೆ ನೀಡಿದರು.
ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಶಿವಶರಣ ಹರಳಯ್ಯ ಗುರುಪೀಠದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಶ್ರೀಮಹಾಶಿವಶರಣ ಹರಳಯ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ಮೂಲಭೂತ ಶಕ್ತಿಗಳು ಪಿತೂರಿ ಮಾಡುವುದನ್ನು ಕೈಬಿಡಬೇಕು. ಭೀಮ ಪರಿವಾರ ಜಾಗೃತವಾಗಿದ್ದು, ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಒಂದು ಸತ್ಯವನ್ನು ಮಾತನಾಡಿದ್ದಕ್ಕೆ ನನ್ನಿಂದ ಕ್ಷಮೆ ಕೇಳಲಾಯಿತು. ಭೀಮ ಪರಿವಾರದ ಶಕ್ತಿಯೂ ಆಗ ಪ್ರದರ್ಶನಗೊಂಡಿತು’ ಎಂದು ಹೇಳಿದರು.
ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ‘ಬಸವಣ್ಣನವರನ್ನು ಕಲ್ಯಾಣದಿಂದ ಓಡಿಸಿದ್ದು ಮುಸ್ಲಿಮರು, ಕ್ರಿಶ್ಚಿಯನ್ನರಲ್ಲ. ಇದೇ ಸಂಪ್ರದಾಯವಾದಿಗಳು ಬಸವಣ್ಣನವರಿಗೆ ಕಿರುಕುಳ ನೀಡಿದರು. ಭಕ್ತರಿಗೆ ಸಂಸ್ಕೃತಿ ಕಲಿಸಿ, ಸಂಸ್ಕಾರ ನೀಡಿದ ಬಸವಣ್ಣ ಮಾಡಿದ ತಪ್ಪಾದರೂ ಏನು’ ಎಂದು ಪ್ರಶ್ನಿಸಿದರು.
‘ಇತ್ತೀಚೆಗೆ ರಾಜಕಾರಣಿಗಳು ಯುವಕರ ಕೈಗೆ ಕತ್ತಿ, ಹತಾರಗಳನ್ನು ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಶಿಬಿರಗಳು ದೇಶದ ಎಲ್ಲೆಡೆ ನಡೆಯುತ್ತಿವೆ. ಯುವಕರಿಗೆ ಧರ್ಮದ ಅಫೀಮಿನ ಧ್ವಜಗಳನ್ನು ಕೊಡಬೇಡಿ. ಕಾಯಕ ಪ್ರಜ್ಞೆ, ದುಡಿಯುವ ಪೆನ್ನುಗಳನ್ನು ನೀಡಿ’ ಎಂದು ಕಿವಿಮಾತು ಹೇಳಿದರು.