ಚಿತ್ರದುರ್ಗ: ‘ದೇಶದ ಮೊದಲ ಪ್ರಧಾನಿ ನೆಹರೂ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಅಪಾರ. ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಅವರೊಂದಿಗೆ ಅನೇಕ ವರ್ಷ ಹೋರಾಡಿದರು’ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಪಂಡಿತ್ ಜವಾಹರಲಾಲ್ ನೆಹರೂ ಅವರ 131ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭಾರತ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿರುವುದಕ್ಕೆ ಭದ್ರ ಬುನಾದಿ ಹಾಕಿದ್ದು ನೆಹರೂ. ಅವರಲ್ಲಿದ್ದ ದೇಶಪ್ರೇಮವನ್ನು ಮಗಳಾದ ಇಂದಿರಾಗಾಂಧಿ ಕೂಡ ಅಳವಡಿಸಿಕೊಂಡು ತಂದೆಯ ಮಾರ್ಗ ಅನುಸರಿಸಿ, ಪ್ರಧಾನಿಯಾಗಿ ಕೊಡುಗೆ ನೀಡಿದ್ದಾರೆ’ ಎಂದರು.
‘ಕಾಂಗ್ರೆಸ್ ರಾಷ್ಟ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ಪಕ್ಷದ ಕಾರ್ಯಕರ್ತರು ಇದನ್ನು ಎಲ್ಲಿ ಬೇಕಾದರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ನಾವೆಲ್ಲರೂ ದೇಶಕ್ಕಾಗಿ ಶ್ರಮಿಸಿದ ಇಂತಹ ಹಿರಿಯರ ಆದರ್ಶ ಅಳವಡಿಸಿಕೊಂಡು ಭಾರತ ಇನ್ನಷ್ಟು ಪ್ರಜ್ವಲಿಸುವಂತೆ ಮಾಡಬೇಕಿದೆ’ ಎಂದು ಸಲಹೆ ನೀಡಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್ಪೀರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಮುಖಂಡರಾದ ಅಜ್ಜಣ್ಣ, ನಜ್ಮತಾಜ್, ಸಂಪತ್, ಮೈಲಾರಪ್ಪ, ಎನ್.ಡಿ. ಕುಮಾರ್, ಕುದ್ದುಸ್, ಮುದಾಸಿರ್ ಇದ್ದರು.