ಮೊಳಕಾಲ್ಮುರು: ತಾಲ್ಲೂಕಿನ ಸಿದ್ದಯ್ಯನಕೋಟೆ ವಿಜಯ ಮಹಾಂತೇಶ್ವರ ಮಠದಲ್ಲಿ 2022ರ ಫೆ.5ರಿಂದ ಮೂರು ದಿನಗಳ ಕಾಲ ಗಡಿನಾಡ ಸಾಂಸ್ಕೃತಿಕ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ.
ಮಠದ ಆವರಣದಲ್ಲಿ ಬುಧವಾರ ಈ ಕುರಿತು ನಡೆದ ಸಭೆಯಲ್ಲಿ ಬಸವಲಿಂಗ ಸ್ವಾಮೀಜಿ ಮಾತನಾಡಿದರು.
ಸರಳವಾಗಿ ಉತ್ಸವ ಆಚರಿಸಲಾಗುವುದು. ಸಾಮಾಜಿಕ ಚಿಂತನಾಗೋಷ್ಠಿ, ರೈತಗೋಷ್ಠಿ, ಶೈಕ್ಷಣಿಕ ಗೋಷ್ಠಿ ನಡೆಸಲಾಗುವುದು. ಸಮಾಜಮುಖಿಯಾಗಿ ಸೇವೆ ಮಾಡಿರುವ ವ್ಯಕ್ತಿಗೆ ಮಹಾಂತಗುರು ಕಾರುಣ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಕಾರ್ಯದರ್ಶಿ ಪಿ.ಆರ್. ಕಾಂತರಾಜ್ ಮಾತನಾಡಿ, ‘ಬಸವಲಿಂಗ ಸ್ವಾಮೀಜಿ ಅವರು ಮಠದ ನೇತೃತ್ವ ವಹಿಸಿಕೊಂಡು 25 ವರ್ಷ ಪೂರೈಸುತ್ತಿರುವ ಕಾರಣ 25 ತಾಲ್ಲೂಕು ಕೇಂದ್ರಗಳಲ್ಲಿ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸಲು ಮಹಾಂತ ಜೋಳಿಗೆ ನಡೆಸಲಾಗುವುದು. ಸ್ವಾಮೀಜಿ ಜೀವನ ಕುರಿತು ಸಾಕ್ಷ್ಯಚಿತ್ರ, ಪುಸ್ತಕ ಬಿಡುಗಡೆ ಮಾಡಲಾಗುವುದು. ಗಡಿನಾಡ ಉತ್ಸವ ನಂತರ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಒಂದು ವರ್ಷ ನಿರಂತರವಾಗಿ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಲಾಗಿದೆ’ ಎಂದರು.
ಉತ್ಸವ ಸಮಿತಿ ಅಧ್ಯಕ್ಷ ಪಟೇಲ್ ಜಿ. ಪಾಪನಾಯಕ, ಬಸವಕೇಂದ್ರ ಅಧ್ಯಕ್ಷ ಎಂ.ಬಿ. ಯೋಗೇಶ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ವಿಜ್ಞಾನ ಪರಿಷತ್ ಜಿಲ್ಲಾ ಅಧ್ಯಕ್ಷ ಲತೀಫ್ ಸಾಬ್, ಮುಖಂಡರಾದ ಲಕ್ಷ್ಮಣ, ರಾಮಲಿಂಗಪ್ಪ, ವೆಂಕಟೇಶ್, ಲೋಕೇಶ್ ಪಲ್ಲವಿ, ನಾಗೇಂದ್ರಪ್ಪ ಇದ್ದರು.