ಹಿರಿಯೂರು: ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ ನೇತೃತ್ವದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ‘ಅಪ್ಪು ಸ್ಮರಣಾರ್ಥ ಯೂಟ್ಯೂಬ್ ಲೈವ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ’ಗೆ ಮಾಜಿ ಸಚಿವ ಡಿ. ಸುಧಾಕರ್ ಚಾಲನೆ ನೀಡಿದರು.
‘ಪುನೀತ್ ಅವರ ಅಕಾಲಿಕ ನಿಧನದ ನಂತರ ಅವರಲ್ಲೊಬ್ಬ ಸಮಾಜ ಸೇವಕ, ಬಡವರ ನೋವುಗಳಿಗೆ ಮಿಡಿಯುವ ಹೃದಯವಂತ ಇದ್ದ ಎಂಬುದು ಜಗಜ್ಜಾಹೀರಾಯಿತು. ತಮ್ಮ ಮರಣಾನಂತರವೂ ನೇತ್ರದಾನ ಮಾಡಿದ್ದರಿಂದ ಲಕ್ಷಾಂತರ ಜನ ಪ್ರೇರಣೆಗೊಂಡು ನೇತ್ರದಾನಕ್ಕೆ ಮುಂದಾಗಿದ್ದಾರೆ. ಇಂದಿನ ಯುವಕರು ಇಂತಹ ವ್ಯಕ್ತಿಗಳನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು’ ಎಂದು ಸುಧಾಕರ್ ತಿಳಿಸಿದರು.
ನಗರಸಭಾಧ್ಯಕ್ಷೆ ಷಂಸುನ್ನೀಸಾ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಾದತ್ ಉಲ್ಲಾ, ಅಶೋಕ್ ಕುಮಾರ್, ವಿ. ಶಿವಕುಮಾರ್, ಎನ್. ವೆಂಕಟೇಶ್, ಮಂಜುನಾಥ ನಾಯಕ ಹಾಗೂ ಪುನೀತ್ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.