ಚಿತ್ರದುರ್ಗ: ‘ಆದರ್ಶದ ಕುರಿತು ಆಸಕ್ತಿ ಹೆಚ್ಚಾಗಬೇಕು. ಧರ್ಮದ ಜತೆಯಲ್ಲಿ ನಡೆಯಲು ಒಲವು ಮೂಡಿಸಿಕೊಳ್ಳಬೇಕು. ಶ್ರೇಷ್ಠ ಚಿಂತನೆಗಳೊಂದಿಗೆ ಯುವಕರು ಮತ್ತು ಮಕ್ಕಳು ಬದುಕು ಹಸನಾಗಿಸಿಕೊಳ್ಳಬೇಕು’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.
ಇಲ್ಲಿಯ ಪ್ರಶಾಂತ ಕಾಲೊನಿಯ ಅಜಿತ್ ಪ್ರಸಾದ್ ಜೈನ್ ಮನೆಯಲ್ಲಿ ಮುರುಘಾ ಮಠದಿಂದ ನಡೆದ ‘ನಿತ್ಯ ಕಲ್ಯಾಣ’ ಎಂಟನೇ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಸಿದ್ಧಾಂತ ಮುಂದಿಟ್ಟುಕೊಂಡ ದಾರ್ಶನಿಕರು ಉದಾತ್ತವಾದ ಜೀವನ ಸಾಗಿಸಿದ್ದಾರೆ. ಈ ಮೂಲಕ ವಿಶ್ವಕ್ಕೆ ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದನ್ನು ಪಾಲಿಸಿದರೆ ಸಮಾಜಕ್ಕೆ ಒಳಿತಾಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಕನ್ನಡಿ ಮಾನವನ ಬಹಿರಂಗದ ತಪ್ಪುಗಳನ್ನು ತಿದ್ದುತ್ತದೆ. ಹಾಗೆಯೇ ಧರ್ಮ, ತತ್ವ, ಮೌಲ್ಯಗಳು ಕನ್ನಡಿ ಇದ್ದ ಹಾಗೆ. ಸೈದ್ಧಾಂತಿಕ ಒಲವು, ಜೀವಪರ ನಿಲುವು ಇರಬೇಕು. ಮಾನವರ ಬದುಕು ಸಾರ್ಥಕವಾಗಲು ಸನ್ಮಾರ್ಗದಲ್ಲಿ ನಡೆಯಬೇಕು’ ಎಂದು ಹೇಳಿದರು.
ಶಿಕಾರಿಪುರ ಮುರುಘಾ ಮಠದ ಚನ್ನಬಸವ ಸ್ವಾಮೀಜಿ, ‘ಪ್ರತಿಯೊಬ್ಬರಿಗೂ ಮೊದಲು ಜ್ಞಾನದ ಸಾಕ್ಷಾತ್ಕಾರ ಆಗಬೇಕು. ಸಾಕ್ಷಾತ್ಕಾರ ಅನುಭಾವ ಉಂಟು ಮಾಡುತ್ತದೆ’ ಎಂದ ಅವರು, ‘ಶರಣರ ಕಲ್ಯಾಣ ನಿತ್ಯ ಕಲ್ಯಾಣವಲ್ಲ. ಅದು ಸತ್ಯ ಕಲ್ಯಾಣವಾಗಿದೆ. ನಾವೆಲ್ಲರೂ ಸತ್ಯದ ಮಾರ್ಗದಲ್ಲಿ ನಡೆಯಬೇಕಿದೆ’ ಎಂದು ಸಲಹೆ ನೀಡಿದರು.
ಬಸವನಾಗಿದೇವ ಸ್ವಾಮೀಜಿ, ಅಜಿತ್ ಪ್ರಸಾದ್ ಜೈನ್, ವಿ.ಆರ್. ನಾಗರಾಜಯ್ಯ ಇದ್ದರು.