ಹಿರಿಯೂರು: ‘ಕೊರೊನಾ ವಾರಿಯರ್ಗಳಿಗೆ ಸರ್ಕಾರ ಹೆಲಿಕಾಪ್ಟರ್ನಲ್ಲಿ ಹೂವು ಸುರಿಸುವುದು ಬೇಡ, ಚಪ್ಪಾಳೆ ಹೊಡೆಸುವುದು ಬೇಡ. ನಮ್ಮ ಕೆಲಸಕ್ಕೆ ತಕ್ಕಂತೆ ನ್ಯಾಯಯುತ ವೇತನ ನೀಡಲಿ’ ಎಂದು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಬುಧವಾರ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
‘ಆರೋಗ್ಯ ಇಲಾಖೆಯಲ್ಲಿ ಕಾಯಂ ನೌಕರರಿಗೆ ಸಿಗುತ್ತಿರುವ ಯಾವ ಸೌಲಭ್ಯಗಳೂ ನಮಗೆ ಸಿಗುತ್ತಿಲ್ಲ. ಐಸೊಲೇಷನ್ ವಾರ್ಡ್, ಪ್ರಯೋಗಾಲಯಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಮನಸ್ಸು ಮಾಡಬೇಕು’ ಎಂದು ಸಂಘದ ಕೆ.ಸಿ.ಸಾಕಮ್ಮ, ಟಿ.ಎಸ್. ಭಾಗ್ಯ, ಮಂಜುಳಾ ಮನವಿ ಮಾಡಿದರು.
ಭರವಸೆ: ‘ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ಈ ಬಗ್ಗೆ ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜತೆ ಮಾತನಾಡುತ್ತೇನೆ’ ಎಂದು ಪೂರ್ಣಿಮಾ ಶ್ರೀನಿವಾಸ್ ಭರವಸೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ನೋಡಲ್ ಅಧಿಕಾರಿ ಡಾ.ರಂಗನಾಥ್, ಡಾ.ಸಂದೀಪ್, ವೃತ್ತ ನಿರೀಕ್ಷಕ ರಾಘವೇಂದ್ರ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಕಬಡ್ಡಿ ಶ್ರೀನಿವಾಸ್, ಅಸ್ಗರ್ ಅಹಮದ್, ಡಿ.ಗಂಗಾಧರ್ ಉಪಸ್ಥಿತರಿದ್ದರು.