ಹೊಳಲ್ಕೆರೆ: ಹಿರಿಯರಾದ ದೇವೇಗೌಡರ ಬಗ್ಗೆ ಕಾಂಗ್ರೆಸ್ ನಾಯಕ ರಾಜಣ್ಣ ಅವರು ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಜೆಡಿಎಸ್ ಮುಖಂಡ ಮಾಳೇನಹಳ್ಳಿ ವೆಂಕಟೇಶ್ ಹೇಳಿದರು.
ತಾಲ್ಲೂಕಿನ ಗುಂಡಿಮಡು ಗ್ರಾಮದಲ್ಲಿ ಭಾನುವಾರ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ದೇವೇಗೌಡರು ರಾಜ್ಯದ ಹೆಮ್ಮೆಯ ರಾಜಕಾರಣಿ. ವಿರೋಧ ಪಕ್ಷದವರೂ ಅವರನ್ನು ಗೌರವಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೇವೇಗೌಡರಿಗೆ ಹೆಚ್ಚು ಮನ್ನಣೆ ನೀಡುತ್ತಾರೆ. ಹೀಗಿರುವಾಗ ಕಾಂಗ್ರೆಸ್ ನಾಯಕ ರಾಜಣ್ಣ ದೇವೇಗೌಡರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ರಾಜಕೀಯ ಭಿನ್ನಾಭಿಪ್ರಾಯಗಳು ಮಾಮೂಲು. ಆದರೆ ವೈಯಕ್ತಿಕ ನಿಂದನೆ ಯಾರಿಗೂ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಂಡಿಮಡು ಗ್ರಾಮದಲ್ಲಿ ಶೇಖರಪ್ಪ, ಗುರುಮೂರ್ತಿ, ಏಕಾಂತಪ್ಪ ಜೆಡಿಎಸ್ಗೆ ಸೇರ್ಪಡೆಯಾದರು. ಮಲ್ಲಾಡಿಹಳ್ಳಿ, ದುಮ್ಮಿ, ಕಾಲ್ಕೆರೆ, ದೊಗ್ಗನಾಳ್, ಕೆಂಗುಂಟೆ, ರಾಮಘಟ್ಟ, ಅಬ್ರ ದಾಸಿಕಟ್ಟೆ, ಚಿಕ್ಕನ ಕಟ್ಟೆ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಲಾಯಿತು.
ವಕೀಲರಾದ ಪಿ.ಎಲ್. ಮೂಲೆಮನೆ, ಯುವ ಘಟಕದ ಅಧ್ಯಕ್ಷ ಕೊಡಗವಳ್ಳಿ ಕೇಶವ್, ನಿವೃತ್ತ ಶಿಕ್ಷಕ ಗೋವಿಂದಪ್ಪ, ಹಾಲೇಶಪ್ಪ, ಚೇತನ್ ನಾಯ್ಕ, ರಂಗಸ್ವಾಮಿ, ವೆಂಕಟೇಶ್, ಪ್ರಕಾಶ್, ಇದ್ದರು.