ಚಿತ್ರದುರ್ಗ: ನಿವೇಶನ ಸೌಲಭ್ಯದಿಂದ ವಂಚಿತರಾದ ಬಡವರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದಲಿತ ಶೋಷಿತ ಸಮಾಜ ಸಂಘರ್ಷ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ಇಲ್ಲಿ ಪ್ರತಿಭಟಿಸಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಕೆಲಕಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಒತ್ತಾಯಿಸಿ ಉಪವಿಭಾಗಾಧಿಕಾರಿ ವಿಜಯಕುಮಾರ್ ಮೂಲಕ ಮನವಿ ಸಲ್ಲಿಸಿದರು.
ಕೂಲಿ ಕೆಲಸ ಮಾಡುತ್ತಿರುವ ಬಡವರು ನಗರದ 35 ಕೊಳೆಗೇರಿಗಳಲ್ಲಿಯೂ ವಾಸಿಸುತ್ತಿದ್ದಾರೆ.ಸ್ವಂತ ಮನೆ ಇಲ್ಲದ ಕಾರಣ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.
ದುಡಿದ ಅಲ್ಪಸ್ವಲ್ಪ ಹಣದಲ್ಲಿ ಮನೆ ಬಾಡಿಗೆ ಕಟ್ಟಿಕೊಂಡು ಜೀವಿಸುತ್ತಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅಸಾಧ್ಯದ ಮಾತಾಗಿದೆ. ಕೆಲವೆಡೆ ಟೆಂಟ್ ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಆದ್ದರಿಂದಸರ್ಕಾರದ ಗಮನಸೆಳೆದು ಎಲ್ಲಿಯಾದರೂ ಜಮೀನು ಖರೀದಿಸಿ ಅರ್ಹರಿಗೆ ನಿವೇಶನ ನೀಡುವುದರ ಜತೆಗೆ ಮನೆಗಳನ್ನು ಕಟ್ಟಿಸಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಕೋರಿದರು.
ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಡನಾಯಕನಹಳ್ಳಿ ರಂಗಪ್ಪ,ಜಿಲ್ಲಾ ಘಟಕದ ಅಧ್ಯಕ್ಷ ಜಿ.ಆರ್. ಪ್ರಭಾಕರ್, ಶಾಂತಕುಮಾರ್, ಹರೀಶ್, ರಾಘವೇಂದ್ರ, ದುರುಗೇಶ್, ಸೋಮಣ್ಣ, ಪರಶುರಾಮ್, ಶಿವಕುಮಾರ್, ಕಿರಣ್ಕೋಟಿ ಅವರೂ ಇದ್ದರು.