ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿ ಸುತ್ತಮುತ್ತ ಗುರುವಾರ ಸಂಜೆ ಉತ್ತಮ ಮಳೆ ಬಿದ್ದಿದೆ.
ಸಂಜೆ 5 ಗಂಟೆ ಸುಮಾರಿಗೆ ಗುಡುಗು, ಮಿಂಚು, ಸಿಡಿಲು ಜತೆ ಆರಂಭವಾದ ಮಳೆ ಮುಕ್ಕಾಲು ಗಂಟೆ ಸುರಿಯುತು. ಮೊಗಲಹಳ್ಳಿ, ಮಾರಮ್ಮನಹಳ್ಳಿ, ಬಿ.ಜಿ.ಕೆರೆಯಲ್ಲೂ ಮಳೆಯಾಗಿದೆ. ಗುರುವಾರ ಬೆಳಿಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ಇತ್ತು. ಆಗಾಗ ಜಿಟಿ, ಜಿಟಿ ಮಳೆಯಾಯಿತು.
ಕಾರ್ಮಿಕರು ಹೊಲಗಳಿಗೆ ಹೋಗಿ ಕೆಲಸ ಮಾಡಲು, ಜಾನುವಾರು, ಕುರಿ ಸಾಕಣೆದಾರರ ಮೇವು ಮೇಯಿಸಲು ತೊಂದರೆ ಅನುಭವಿಸಿದರು.
ಸೋಮವಾರ ರಾತ್ರಿ ತಾಲ್ಲೂಕಿನಲ್ಲಿ ಮಳೆಯಾಗಿದೆ. ದೇವಸಮುದ್ರ ಮಾಪನ ಕೇಂದ್ರದಲ್ಲಿ 33 ಮಿ.ಮೀ, ರಾಂಪುರ ಕೇಂದ್ರದಲ್ಲಿ 20 ಮಿ.ಮೀ, ಮೊಳಕಾಲ್ಮುರು ಸುತ್ತಮುತ್ತ 19 ಮಿ.ಮೀ, ರಾಯಾಪುರ ಭಾಗದಲ್ಲಿ 22.3 ಮಿ.ಮೀ ಮಳೆಯಾಗಿದೆ ಎಂದು ತಾಲ್ಲೂಕು ಕಚೇರಿ ಮೂಲಗಳು ತಿಳಿಸಿವೆ.
ಮಳೆ: ಮನೆಗಳ ಗೋಡೆ ಕುಸಿತ
ಚಿಕ್ಕಜಾಜೂರು: ಈಚೆಗೆ ಸುರಿದ ಮಳೆಯಿಂದಾಗಿ ಹಲವು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಜಾಜೂರಿನ ಮುಖ್ಯರಸ್ತೆ ಯಲ್ಲಿರುವ ರಾಜೇಶ್ವರಿ ರಾಜಶೇಖರಾ ಚಾರ್ ಅವರ ಮನೆಯ ಹಿಂಭಾಗದ ಗೋಡೆ ಕುಸಿದಿದ್ದರಿಂದ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಚಿಕ್ಕಜಾಜೂರಿನ ಹೊಸನಗರ ಬಡಾವಣೆಯ ಶಾಂತಮ್ಮ ನಾಗರಾಜ್ ಅವರ ಮನೆಯ ಗೋಡೆಯೂ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಜೀವ ಹಾನಿಯಾಗಿಲ್ಲ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಶವಾಪುರ ಗ್ರಾಮದ ಕರಿಯಮ್ಮ ಸುರೇಶ್ ಅವರ ಮನೆ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಅವಘಡದಲ್ಲಿ ಎರಡು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗದೆ. ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಕರಿಯಮ್ಮ ಮನವಿ ಮಾಡಿದ್ದಾರೆ.