ಚಿಕ್ಕಜಾಜೂರು: ಜುಲೈ ತಿಂಗಳ ಆರಂಭದಿಂದ ನಿತ್ಯ ಸೋನೆ ಮಳೆಯಾಗುತ್ತಿದ್ದು, ಬಿತ್ತನೆ ಮಾಡಿದ್ದ ಬಹುತೇಕ ಜಮೀನುಗಳಲ್ಲಿ ಮೆಕ್ಕೆಜೋಳ ಮೊಳಕೆಯೊಡೆದಿದೆ. ಆದರೆ, ಮಳೆಯಿಂದ ಕಳೆ ಹೆಚ್ಚಾಗಿದೆ.
ನಾಲ್ಕೈದು ದಿನಗಳಿಂದ ಮೋಡ ಮುಚ್ಚಿದ ವಾತಾವರಣವಿದ್ದು, ಆಗಾಗ್ಗೆ ಸೋನೆ ಮಳೆ ಬೀಳುತ್ತಿದೆ. ಎರೆ, ಕೆಂಪು ಹಾಗೂ ಮರಳು ಭೂಮಿಗಳಲ್ಲಿ ಜನರು ಓಡಾಡುವುದೂ ಕಷ್ಟವಾಗುತ್ತಿದೆ.
ಐಯ್ಯನಹಳ್ಳಿ, ಕಡೂರು, ಚನ್ನಪಟ್ಟಣ, ಚಿಕ್ಕಜಾಜೂರಿನ ಮಾರುತಿ ನಗರ, ತಣಿಗೆಹಳ್ಳಿ, ಹಿರೇಕಂದವಾಡಿ, ಕಲ್ಲವ್ವನಾಗತಿಹಳ್ಳಿ ಮೊದಲಾದ ಕಡೆಗಳಲ್ಲಿರುವ ಕಲ್ಲು ಭೂಮಿಗಳಲ್ಲಿ ಕೆಲವು ರೈತರು ಮೇಲು ಗೊಬ್ಬರವನ್ನು ಹಾಕಿ, ಎಡೆಕುಂಟೆ ಹೊಡೆಯುತ್ತಿದ್ದುದು ಕಂಡುಬಂತು.
ಉಳಿದ ಕಡೆಗಳಲ್ಲಿ ಮೆಕ್ಕೆಜೋಳದ ಜತೆ, ಕಳೆ ಹುಲ್ಲು ಹೆಚ್ಚಾಗುತ್ತಿದ್ದು, ಎಡೆಕುಂಟೆ ಹೊಡೆಯಲು ಮಳೆ ಬಿಡುತ್ತಿಲ್ಲ. ವಾತಾವರಣ ಹೀಗೆ ಮುಂದುವರಿದರೆ, ಮೆಕ್ಕೆಜೋಳ ಪೈರಿಗೆ ಬದಲು ಹೊಲಗಳಲ್ಲಿ ಕಳೆಯನ್ನೇ ನೋಡುವಂತಾಗುತ್ತದೆ ಎಂದು ರೈತರು ಹೇಳಿದರು.