ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಶುಕ್ರವಾರ ನಸುಕಿನಿಂದ ಗುಡುಗು ಸಹಿತ ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗೆ ತೊಂದರೆಯುಂಟಾಗಿದೆ. ರಾಗಿ ಒಕ್ಕಣೆ, ಮೆಕ್ಕೆಜೋಳದ ಕಾಳು ಬೇರ್ಪಡಿಸಲು ತೊಂದರೆ ಆಗಿದೆ.
ಗುರುವಾರ ಸಂಜೆ ಸುರಿದಿದ್ದ ಮಳೆ ರಾತ್ರಿ ಬಿಡುವು ಕೊಟ್ಟಿತ್ತು. ನಸುಕಿನ 3.30ರಿಂದ ಮತ್ತೆ ಶುರುವಾದ ಮಳೆ ಬಿರುಸು ಪಡೆಯಿತು. ಚರಂಡಿಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.
ಚಿತ್ರದುರ್ಗದ ಪ್ರಶಾಂತ ನಗರ, ಗುಮಾಸ್ತರ ಕಾಲೊನಿ ಸೇರಿ ಹಲವೆಡೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಚರಂಡಿಗಳು ತುಂಬಿ ರಸ್ತೆ ಮೇಲಿ ನೀರು ಹರಿಯುತ್ತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ, ಸಿರಿಗೆರೆ, ಭೀಮಸಮುದ್ರ, ಹಿರಿಯೂರು ತಾಲ್ಲೂಕಿನ ಧರ್ಮಪುರ, ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ, ಪರಶುರಾಂಪುರ, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸೇರಿ ಜಿಲ್ಲೆಯ ಹಲವೆಡೆ ಉತ್ತಮ ಮಳೆ ಬಿದ್ದಿದೆ.
ವಿ.ವಿ.ಸಾಗರ ಜಲಾಶಯದಿಂದ ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಬೆಳೆಗೆ ನೀರು ಹರಿಸಬೇಕಿತ್ತು. ಉತ್ತಮ ಮಳೆ ಬಿದ್ದಿದ್ದರಿಂದ ನೀರು ಹರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.