ಚಳ್ಳಕೆರೆ: ಆಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ತಾಲ್ಲೂಕಿನ ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮದ ಮಹಿಳೆಯರು ಮತ್ತು ಕನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಸೋಮವಾರ ತಹಶೀಲ್ದಾರ್ ಮತ್ತು ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮದ ಅಂಗಡಿಗಳಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ನಿರುದ್ಯೋಗಿ ಯುವಕರು ಬಲಿಯಾಗುತ್ತಿದ್ದಾರೆ ಎಂದುಕನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನಗರಂಗೆರೆ ಮಹೇಶ್ ಆತಂಕ ವ್ಯಕ್ತಪಡಿಸಿದರು.
ಮದ್ಯದ ಚಟಕ್ಕೆ ಬಲಿಯಾದ ಗ್ರಾಮದ ಹಲವು ಕುಟುಂಬಗಳು ಬೀದಿಪಾಲಾಗಿವೆ. ಹೀಗಾಗಿ ಮದ್ಯ ಮಾರಾಟವನ್ನು ಕೂಡಲೇ ನಿಷೇಧಿಸಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.
ಹೊಲ-ಮನೆಯ ಕೂಲಿ ಕೆಲಸದಿಂದ ಮಕ್ಕಳ ಶಿಕ್ಷಣಕ್ಕೆ ಕೂಡಿಟ್ಟ ಹಣವನ್ನು ದೋಚಿ ಪುರುಷರು ಮದ್ಯ ಸೇವನೆ ಮಾಡುತ್ತಾರೆ. ಅಲ್ಲದೇ ದಿನಾಲು ಗಲಾಟೆ ಮಾಡುತ್ತಾರೆ. ಸಂಸಾರದಲ್ಲಿ ನೆಮ್ಮದಿಯೇ ಇಲ್ಲವಾಗಿದೆ ಎಂದು ಗ್ರಾಮಸ್ಥರಾದ ಶಾಂತಮ್ಮ ಬೇಸರ ವ್ಯಕ್ತಪಡಿಸಿದರು.
ಮದ್ಯದಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು. ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಮಾಲೀಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಎನ್. ರಘುಮೂರ್ತಿ ಭರವಸೆ ನೀಡಿದರು.
ಮಹಿಳಾ ಸ್ವ ಸಹಾಯ ಸಂಘದ ಪ್ರತಿನಿಧಿ ರೂಪ, ಶಶಿಕಲಾ, ಗೀತಾ, ಕಮಲಮ್ಮ, ಮಂಜುಳಾ, ನಾಗವೇಣಿ ಇದ್ದರು.