ರಸ್ತೆ ಬದಿ ಅಡಿಕೆ ಸಿಪ್ಪೆ: ಚಾಲಕರ ಆಕ್ಷೇಪ

ಚಿಕ್ಕಜಾಜೂರು: ಕೆಲವರು ಅಡಿಕೆ ಸುಲಿದ ನಂತರ ಸಿಪ್ಪೆಯನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದಾರೆ. ಸಿಪ್ಪೆ ಒಣಗಿದ ನಂತರ ದಾರಿ ಹೋಕರು ಬೆಂಕಿ ಹಾಕುವುದರಿಂದ ರಸ್ತೆ ತುಂಬಾ ಹೊಗೆ ಆವರಿಸುತ್ತದೆ. ಇದರಿಂದ ವಾಹನ ಚಲಾಯಿಸಲು ತೊಂದರೆ ಆಗುತ್ತಿದೆ. ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ವಾಹನಗಳ ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೋಬಳಿ ಕೇಂದ್ರವಾದ ಬಿ. ದುರ್ಗದ ಹೊರ ವಲಯದ ಹೊಳಲ್ಕೆರೆ– ದಾವಣಗೆರೆ ಮಾರ್ಗದಲ್ಲಿ ಗ್ರಾಮದ ಕೆಲ ಅಡಿಕೆ ಬೆಳೆಗಾರರು ಅಡಿಕೆ ಸುಲಿದ ನಂತರ, ಸಿಪ್ಪೆಯನ್ನು ರಸ್ತೆ ಬದಿಗೆ ಹಾಕಿದ್ದು, ಮಂಗಳವಾರ ಹಾಗೂ ಬುಧವಾರ ರಸ್ತೆ ಬದಿಯಲ್ಲಿ ಒಣಗಿದ್ದ ಅಡಿಕೆ ಸಿಪ್ಪೆಗೆ ದಾರಿ ಹೋಕರು ಬೆಂಕಿ ಹಚ್ಚಿದ್ದಾರೆ. ಇದರಿಂದ ರಸ್ತೆ ತುಂಬ ಹೊಗೆ ಹರಡಿಕೊಂಡಿತ್ತು.
ಪರಿಣಾಮ ಎದುರಿಗೆ ಬರುವ ವಾಹನಗಳು ಕಾಣದಿದ್ದುದರಿಂದ ಕೆಲ ನಿಮಿಷಗಳ ಕಾಲ ವಾಹನಗಳನ್ನು ನಿಲ್ಲಿಸಿ ನಂತರ ಮುಂದೆ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿಷಯ ತಿಳಿದ ಚಿಕ್ಕಜಾಜೂರು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಹೊಳಲ್ಕೆರೆಯ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದರು.
ಮುಖ್ಯ ರಸ್ತೆಗೆ ಸಿಪ್ಪೆ ಹಾಕದಂತೆ ಚಾಲಕರ ಮನವಿ: ‘ಹೋಬಳಿಯ ಅನೇಕ ಕಡೆ ಮತ್ತು ಹೊಳಲ್ಕೆರೆಯಿಂದ ದಾವಣಗೆರೆ ಮಾರ್ಗದಲ್ಲಿ, ಚಿಕ್ಕಜಾಜೂರಿನಿಂದ ಅರಸನಘಟ್ಟ ಮಾರ್ಗದ ಮೂಲಕ ಚಿತ್ರದುರ್ಗಕ್ಕೆ ಹೋಗುವ ಮಾರ್ಗದಲ್ಲಿನ ಅನೇಕ ಗ್ರಾಮಗಳ ರೈತರು ಮುಖ್ಯ ರಸ್ತೆ ಬದಿಗೆ ಅಡಿಕೆ ಸಿಪ್ಪೆಯನ್ನು ತಂದು ಹಾಕುತ್ತಿದ್ದಾರೆ. ಈ ಕ್ರಮ ಸರಿಯಲ್ಲ. ಸಿಪ್ಪೆಯನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಿ’ ಎಂದು ವಾಹನ ಚಾಲಕರಾದ ಬಸವರಾಜ್, ಕಾರ್ತಿಕ್, ಹನುಮಂತಪ್ಪ, ಕಿರಣ್, ಸಾದುಲ್ಲಾಖಾನ್, ಪ್ರಕಾಶ್ ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.