ಹಿರಿಯೂರು: ನಗರದ ನೆಹರೂ ಮೈದಾನದಲ್ಲಿ ಶನಿವಾರ ಟೌನ್ ಫುಟ್ಬಾಲ್ ಕ್ಲಬ್ ನೇತೃತ್ವದಲ್ಲಿ ನಡೆಯುತ್ತಿರುವ ಎರಡು ದಿನಗಳ ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ಆಹ್ವಾನಿತ ಫುಟ್ಬಾಲ್ ಪಂದ್ಯಾವಳಿಗೆ ನಗರಸಭೆ ಮಾಜಿ ಸದಸ್ಯ ಶಿವು ಯಾದವ್ ಚಾಲನೆ ನೀಡಿದರು.
ಹಿರಿಯ ಕ್ರೀಡಾಪಟು ಶಿವಶಂಕರ ಮಠದ್, ‘ತಾಲ್ಲೂಕಿನಲ್ಲಿ ರಾಷ್ಟ್ರ–ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿದ್ದಾರೆ. ತಾಲ್ಲೂಕು ಕ್ರೀಡಾಂಗಣವಿದ್ದರೂ ಅಗತ್ಯ ಸೌಕರ್ಯಗಳಿಲ್ಲ. ತರಬೇತುದಾರರಿಲ್ಲ. ತಳ್ಳುಗಾಡಿಗಳವರು ತಿಂಡಿ–ತಿನಿಸು ಮಾರುವ ತಾಣವಾಗಿರುವ ಹಳೆಯ ನೆಹರೂ ಕ್ರೀಡಾಂಗಣಕ್ಕೆ ಕಾಂಪೌಂಡ್ ನಿರ್ಮಿಸುವ ಬಗ್ಗೆ ಶಾಸಕರು ಚಿಂತನೆ ಮಾಡಬೇಕು’ ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಪಲ್ಲವ, ಎಲ್ಐಸಿ ಅಭಿವೃದ್ಧಿ ಅಧಿಕಾರಿ ಅಕ್ರಂ, ಸಂಘಟಕ ಅಲೆಕ್ಸ್, ಉಪನ್ಯಾಸಕ ಪ್ರಭು, ನಜೀರ್, ಅರುಣ್, ಎಬಿನೇಜರ್ ಹಾಜರಿದ್ದರು.