ಕಡೂರು: ವಿಧಾನಸಭಾ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಬುಧವಾರ ನಡೆಯಿತು.
‘ನಾಮಪತ್ರ ಸಲ್ಲಿಕೆಗೆ ಮಂಗಳವಾರ (ಏ.24) ಕಡೇ ದಿನವಾಗಿತ್ತು. ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ಪೈಕಿ ಶಾಸಕ ವೈ.ಎಸ್.ವಿ.ದತ್ತ, ಸಿ.ನಂಜಪ್ಪ ಮತ್ತು ಕೆ.ಎಸ್.ಆನಂದ್ ತಲಾ ಎರಡು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಸಿ.ನಂಜಪ್ಪ ಅವರು ಕಾಂಗ್ರೆಸ್ನಿಂದ ಸಲ್ಲಿಸಿದ್ದ ನಾಮಪತ್ರ ಬಿ.ಫಾರಂ ಇಲ್ಲದ ಕಾರಣ ತಿರಸ್ಕೃತಗೊಂಡಿದೆ. ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಟಿ.ಆರ್.ಲಕ್ಕಪ್ಪ ಅವರ ನಾಮಪತ್ರ ಸಹ ಬಿ.ಫಾರಂ ಇಲ್ಲದ ಕಾರಣ ತಿರಸ್ಕೃತಗೊಂಡಿದೆ. ಒಟ್ಟಾರೆ 17 ನಾಮಪತ್ರಗಳಲ್ಲಿ 2 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 15 ನಾಮಪತ್ರಗಳು ಕ್ರಮಬದ್ಧವಾಗಿವೆ’ ಎಂದು ಚುನಾವಣಾಧಿಕಾರಿ ಹನುಮನ ರಸಯ್ಯ ತಿಳಿಸಿದರು.
ಕರ್ನಾಟಕ ಕೈಗಾರಿಕಾ ಮೂಲ ಸೌಕರ್ಯ ನಿಗಮದ ಅಧ್ಯಕ್ಷ ಸಿ.ಎಂ.ಧನಂಜಯ ಹಾಗೂ ಕೆಪಿಸಿಸಿ ರಾಜ್ಯ ಸಮಿತಿ ಸದಸ್ಯ ಸಿ.ನಂಜಪ್ಪ ಸ್ವತಂತ್ರ ಅಭ್ಯರ್ಥಿಗಳಾಗಿ ಸಲ್ಲಿಸಿರುವ ನಾಮಪತ್ರಗಳೂ ಕ್ರಮಬದ್ಧವಾಗಿವೆ. ನಾಮಪತ್ರ ವಾಪಸ್ ಪಡೆಯಲು ಏ.27 ಕೊನೆಯ ದಿನವಾಗಿದೆ.