ಚಿತ್ರದುರ್ಗ: ಮೋಜಿಗಾಗಿ ಶ್ರೀಗಂಧ ಕಳವು ಮಾಡುತ್ತಿದ್ದ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ₹ 2.6 ಲಕ್ಷ ಮೌಲ್ಯದ 52 ಕೆ.ಜಿ. ಶ್ರೀಗಂಧ ಮರದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ಪಾಂಡುರಂಗಸ್ವಾಮಿ (50), ಮಹಾಂತೇಶ್ (28), ಬಸವರಾಜ (36), ರಾಜಪ್ಪ (48), ಚಿತ್ರದುರ್ಗ ತಾಲ್ಲೂಕಿನ ಗೌರಮ್ಮನಹಳ್ಳಿಯ ಮುನ್ನ ಅಲಿಯಾಸ್ ನವೀದ್ ಅಹಮ್ಮದ್ (55) ಬಂಧಿತರು.
ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದ ಪ್ರಶಾಂತ್ಕುಮಾರ್ ಎಂಬುವರಿಗೆ ಸೇರಿದ ಜಮೀನು ಸಾಸಲು ಗ್ರಾಮದಲ್ಲಿದೆ. ಇದರ ನಾಲ್ಕು ಎಕರೆಯಲ್ಲಿ 50 ಶ್ರೀಗಂಧದ ಮರಗಳನ್ನು ಬೆಳೆದಿದ್ದಾರೆ. ಜುಲೈ 10ರಂದು ಬೆಳಿಗ್ಗೆ ಜಮೀನಿಗೆ ತೆರಳಿದಾಗ 8 ಮರಗಳನ್ನು ಕಡಿದು ಹಾಕಲಾಗಿತ್ತು. ಇದರಲ್ಲಿ ಐದು ಮರಗಳನ್ನು ಬಿಟ್ಟು ಮೂರು ಮರಗಳನ್ನು ಸಾಗಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಜೂರು ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದರು. ಸ್ಥಳದಲ್ಲಿ ಸಿಕ್ಕ ಸಾಂದರ್ಭಿಕ ಸಾಕ್ಷ್ಯಗಳ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಮೋಜಿಗಾಗಿ ಶ್ರೀಗಂಧ ಕಳವು ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.